ಮೋದಿ ಇಡೀ ವಿಶ್ವಕ್ಕೆ ಹುಲಿ: ಈಶ್ವರಪ್ಪ

Public TV
2 Min Read

ಶಿವಮೊಗ್ಗ: ಬಂಡೀಪುರದಲ್ಲಿ (Bandipur) ನರೇಂದ್ರ ಮೋದಿ (Narendra Modi) ಅವರಿಗೆ ಹುಲಿ (Tiger) ಕಾಣಲಿಲ್ಲ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಆದರೆ ಮೋದಿ ಇಡೀ ವಿಶ್ವಕ್ಕೆ ಹುಲಿ. ಅಂತಹ ಹುಲಿಯ ನೇತೃತ್ವದಲ್ಲಿ ದೇಶ ಸಾಗುತ್ತಿರುವುದು ನಮ್ಮ ಪುಣ್ಯ ಎಂದು ಶಿವಮೊಗ್ಗದಲ್ಲಿ (Shivamogga) ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S. Eshwarappa) ಹೇಳಿದ್ದಾರೆ.

ಟೀಕೆ ಮಾಡುವುದು ಬಿಟ್ಟರೆ ಕಾಂಗ್ರೆಸ್‍ನವರಿಗೆ ಏನು ಗೊತ್ತಿಲ್ಲ. ಹುಲಿ ಕಾಣಲಿಲ್ಲ ಎನ್ನುವುದಕ್ಕೂ ಟೀಕೆ, ಅಕಸ್ಮಾತ್ ಒಂದು ಹುಲಿ ಕಂಡಿದ್ದರೆ ಒಂದೇ ಕಾಣಿಸಿದೆ ಎಂದು ಟೀಕೆ ಮಾಡುತ್ತಿದ್ದರು. ಟೀಕೆಯಲ್ಲೇ ಅವರ ಜೀವನ ಕಳೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಾಲ್ಕು ಬಾರಿ ಗೆದ್ದರೂ ಮಂತ್ರಿಯೇ ಆಗದ ಮಹಾರಾಜ!

ರಾಜ್ಯಕ್ಕೆ ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಉಕ್ಕಿನ ಮನುಷ್ಯ ಗೃಹ ಮಂತ್ರಿ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಂದು ಹೋಗುತ್ತಿದ್ದಾರೆ. ರಾಷ್ಟ್ರದ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬರುತ್ತಿರುವುದು ಕಾಂಗ್ರೆಸ್‍ನವರಿಗೆ ಭಯ ತಂದಿದೆ. ರಾಷ್ಟ್ರೀಯ ನಾಯಕರು ಬಂದು ಹೋಗುವುದಕ್ಕೂ ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಲಕ್ಷಣಗಳಿಲ್ಲ ಹಾಗಾಗಿ ಟೀಕೆಯಲ್ಲಿ ತೊಡಗಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ಇವರಿಗೆ ನಾಯಕರೇ ಇಲ್ಲ, ಅವರ ಮುಖ ನೋಡಿದ್ರೆ ವೋಟ್ ಬರುತ್ತದೆಯೇ ಎನ್ನುತ್ತಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರ ಮುಖ ತೋರಿಸಿ ಜನರ ಬಳಿ ವೋಟ್ ಕೇಳಲಿ ನಮ್ಮ ಅಭ್ಯಂತರ ಇಲ್ಲ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಬರುತ್ತಾರೆ ಎಂದು ಕೋಲಾರ ಕಾರ್ಯಕ್ರಮವನ್ನು 3 ಬಾರಿ ಮುಂದೆ ಹಾಕಿದ್ದಾರೆ. ನಿಮಗೆ ನಾಯಕರುಗಳೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ದೇಶ ಹಾಗೂ ವಿಶ್ವ ಮೆಚ್ಚಿದ ನಾಯಕರು ಬಿಜೆಪಿಯಲ್ಲಿ (BJP) ಇದ್ದಾರೆ ಅದಕ್ಕಾಗಿ ನಾವು ಅವರನ್ನು ಕರೆಸುತ್ತೇವೆ. ವಿಶ್ವ ನಾಯಕ ನರೇಂದ್ರ ಮೋದಿ ಅವರು ನಮ್ಮ ನಾಯಕರಾಗಿರುವುದು ನಮ್ಮ ಹೆಮ್ಮೆ. ಯಡಿಯೂರಪ್ಪ (B.S Yediyurappa), ಬೊಮ್ಮಾಯಿ (Basavaraj Bommai) ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಮೆಚ್ಚುಗೆ ಇದೆ. ರಾಜ್ಯದಲ್ಲಿ ಬಿಜೆಪಿಗೆ ಈ ಬಾರಿ ಪೂರ್ಣ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ. ಈಗಾಗಲೇ 224 ಕ್ಷೇತ್ರದ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿದೆ. ಒಂದೊಂದು ಕ್ಷೇತ್ರಕ್ಕೆ ಮೂರು ಹೆಸರು ಪಟ್ಟಿಯಲ್ಲಿ ಕಳುಹಿಸಿಕೊಟ್ಟಿದ್ದಾರೆ. ಕೇಂದ್ರದ ಚುನಾವಣಾ ಸಮಿತಿಯವರು ಕುಳಿತು ಚರ್ಚೆ ಮಾಡಿದ್ದಾರೆ. ಸೋಮವಾರ ಸಂಜೆ 170 ರಿಂದ 180 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ದೇಶದಲ್ಲಿ ಆರ್‍ಎಸ್‍ಎಸ್ (RSS) ಇಲ್ಲದಿದ್ದರೆ ಹಿಂದುಗಳು ಉಳಿಯುತ್ತಿರಲಿಲ್ಲ. ಆರ್‍ಎಸ್‍ಎಸ್ ಪ್ರಜಾಪ್ರಭುತ್ವ ಉಳಿಸಿದೆ. ಸಂವಿಧಾನಕ್ಕೆ ಒಳ್ಳೆಯ ಹೆಸರು ತಂದಿದೆ, ಎಲ್ಲರಿಗೂ ಮೀಸಲಾತಿಯಲ್ಲಿ ನ್ಯಾಯ ದೊರಕಿಸಿದೆ.ಸಿದ್ದರಾಮಯ್ಯ ಆರ್‍ಎಸ್‍ಎಸ್ ಟೀಕೆ ಮಾಡುವುದನ್ನು ಬಿಡದಿದ್ದರೆ ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ

Share This Article