ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನೂರು ಜಲಪಾತಕ್ಕೆ ಪ್ರವಾಸ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾದ ಘಟನೆ ನಡೆದಿದೆ.
ಧಾರವಾಡ ಮೂಲದ ಸುಹೇಲ್ ಸೈಯದ್ ಅಲಿ ಶೇಖ್ (21) ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆಯಾದವರಾಗಿದ್ದಾರೆ.
ಹಳಿಯಾಳ ಇಂಜಿನಿಯರಿಂಗ್ ಕಾಲೇಜಿನಲ್ಲಿ E&C ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಸುಹೇಲ್ನೊಂದಿಗೆ ನಾಲ್ವರು ವಿದ್ಯಾರ್ಥಿಗಳು, ನಾಲ್ವರು ವಿದ್ಯಾರ್ಥಿನಿಯರು ಸೇರಿ ಒಟ್ಟು 8 ಜನರ ತಂಡ ಕಾನೂರು ಜಲಪಾತಕ್ಕೆ ಬಂದಿದ್ದರು.
ಜಲಪಾತದ ಮುಂದೆ ಫೋಟೋಶೂಟ್ ಮಾಡುವ ವೇಳೆ ಕಾಲು ಜಾರಿ ಬಿದ್ದು ಸುಹೇಲ್ ಶೇಖ್ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಯಲ್ಲಾಪುರ ಸಿಪಿಐ ರಮೇಶ್ ಹರಗಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ಹಾಗೂ ಆಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.