ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರ್ತಾನೆ: ಜಗ್ಗೇಶ್

Public TV
3 Min Read

ಬೆಂಗಳೂರು: ಡಾ.ರಾಜ್‍ಕುಮಾರ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರುತ್ತಾನೆ ಎಂದು ನಟ ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡು ಭಾವುಕವಾಗಿ ಮಾತನಾಡಿದ್ದಾರೆ. ಈ ವೇಳೆ, ನಮ್ಮ ಬದುಕಿನಲ್ಲಿ ಇಂತಹ ದಿನ ಬರುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಅದರಲ್ಲಿಯೂ ವಿಶೇಷವಾಗಿ ನನಗೆ ಇನ್ನೂ ಈ ವಿಚಾರ ನನ್ನ ಮೆದುಳಿಗೆ ಹೋಗಿಲ್ಲ. ಕಾರಣ ಅಪ್ಪು ಜೊತೆ ನಾನು ತಿಂಗಳಿಗೆ ಎರಡು ಬಾರಿಯಾದರೂ ಮಾತನಾಡುತ್ತಿದ್ದೆ ಎಂದು ನೆನೆದರು.

ರಾಜ್‍ಕುಮಾರ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಬರುತ್ತಾನೆ. ನಾವು ಇರುತ್ತೇವೂ, ಇಲ್ಲವೋ ಗೊತ್ತಿಲ್ಲ. ಆದರೆ ನೀವು ನೆನಪಿನಲ್ಲಿ ಇಟ್ಟುಕೊಳ್ಳಿ. 20-23 ವರ್ಷದಲ್ಲಿ ಆಕಸ್ಮಿಕವಾಗಿ ಒಬ್ಬ ಸೂಪರ್ ಸ್ಟಾರ್ ಬರುತ್ತಾನೆ. ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಅವನೇ ನಿಮ್ಮ ಪುನೀತ್. ನನ್ನ ಆತ್ಮ ಹೇಳುತ್ತಿದೆ. ಅವನು ವಾಪಸ್ಸು ಬರುತ್ತಾನೆ ಎಂದು ಭವಿಷ್ಯದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

ಭವಿಷ್ಯದಲ್ಲಿ ಪುನೀತ್ ಬಹಳ ವಿಶೇಷವಾಗಿ ಬರುತ್ತಾನೆ. ಪೂರ್ಣ ಆಯುಷ್ಯವನ್ನು ಇಟ್ಟುಕೊಂಡು ಬರುತ್ತಾನೆ. ಏಕೆಂದರೆ ಆತನಿಗೆ ಭವಿಷ್ಯದಲ್ಲಿ ಇನ್ನೂ ಮಾಡಬೇಕು ಎಂಬ ಆಸೆ ಅವನಲ್ಲಿ ಇತ್ತು. ಅದಕ್ಕೆ ಅವನು ಮತ್ತೆ ಬರುತ್ತಾನೆ. ಶಾಸ್ತ್ರಗಳನ್ನು ನೋಡಿದರೆ ಕೆಲವು ಗ್ರಹ-ಗತಿಗಳು ದಾಟುವ ಸಮಯದಲ್ಲಿ ಈ ರೀತಿ ಆಗುತ್ತೆ ಎಂದು ಹೇಳಿದರು.

ನಮ್ಮ ಸಂತೋಷ ಆನಂದ್ ರಾಮ್ ನನಗಾಗಿ ಒಂದು ಸ್ಕ್ರಿಪ್ಟ್ ಸಿದ್ಧ ಪಡಿಸಿದಾಗ ಪುನೀತ್ ನಾನು ಸಹ ಆ ಕಥೆಯನ್ನು ಕೇಳಬೇಕು ಎಂದು ಆತನೂ ಸಹ ಸ್ಕ್ರಿಪ್ಟ್ ಅನ್ನು ಕೇಳಿದ. ಆತನಿಗೆ ನನ್ನ ಸ್ಕ್ರಿಪ್ಟ್ ಕೇಳಬೇಕು ಎನ್ನುವ ಯಾವ ಅವಶ್ಯಕತೆಯೂ ಸಹ ಇರಲಿಲ್ಲ. ಅಂತಹ ಒಳ್ಳೆಯ ಮನಸ್ಸು ಅವನದ್ದು. ಅಪ್ಪು ಸಾಯುವ ಕೊನೆ ಐದು ದಿನಗಳಿರಬೇಕಾದರೆ ಈ ಘಟನೆ ನಡೆದಿತ್ತು. ಮಲೇಶ್ವರಂಗೆ ಅವರು ಬಂದಿರುವ ಸುದ್ದಿ ಕೇಳಿ ನಾನು ಸಹ ಹೋದೆ. ಆ ವೇಳೆ ನಾನು ಮಾಡಿದ ತಮಾಷೆಯನ್ನು ಕೇಳಿ ಎಷ್ಟು ನಗುತ್ತಿದ್ದ ಎಂದು ನೆನೆದರು.

ಮಗುವಿನಂತಹ ಮನಸ್ಸು!

ಪುನೀತ್ ಸುಧಾರಾಣಿ ಮನೆಯ ಬಳಿ ಪಾರ್ಕಿಂಗ್ ಮಾಡಬೇಕಾದರೆ 1 ರಿಂದ ಒಂದೂವರೆ ನಿಮಿಷದವರೆಗೂ ಅವನು ನನಗೆ ಟಾಟಾ ಮಾಡುತ್ತಿದ್ದ. ಆದರೆ ಎಂದೂ ನನಗೆ ಅವನು ಟಾಟಾ ಮಾಡಿಲ್ಲ. ಎಂತಹ ಮಗುವಿನಂತಹ ಮನಸ್ಸು ಇವನದ್ದು ಎಂದು ನಾನು ಮನಸ್ಸಿನಲ್ಲಿ ಹೇಳಿಕೊಂಡಿದ್ದೆ ಎಂದರು.

ಇವತ್ತು ನನ್ನದು ಎಂಥಹ ದೌರ್ಭಾಗ್ಯ ಎಂದರೆ ಇಂದು ಈ ಕಾರ್ಯಕ್ರಮದಲ್ಲಿ ಮಾತನಾಡುವುದು. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ನಾವು 60ರ ಗಡಿಗೆ ಬಂದಿದ್ದೇವೆ. ಅವನು ನಮ್ಮನ್ನು ಕಳಿಸಿಕೊಂಡಬೇಕಿತ್ತು. ಆದರೆ ಇಂದು ನಾವು ಅವನನ್ನು ಕಳುಹಿಸಿಕೊಂಡುವ ಸಮಯ ಬಂದಿದೆ. ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ ಎಂದರು.

ಕನ್ನಡ ಚಿತ್ರರಂಗಕ್ಕೆ ಬಹಳ ಗಟ್ಟಿಯಾದ ನಟ. ಬೇರೆ ಯಾವುದೇ ಭಾಷೆಯ ಸಿನಿಮಾಗಳ ಬಗ್ಗೆ ಮಾತನಾಡಿದಾಗ ನಾವು ಇದ್ದೇವೆ ಎಂದು ನಿರೂಪಿಸುವ 4-5 ನಟರಲ್ಲಿ ಈತನೂ ಒಬ್ಬ. ಇದನ್ನು ಎಂದೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ನಾವು ನಮಗೆ ಸಮಾಧಾನ ಮಾಡಿಕೊಳ್ಳಬೇಕಾಗುತ್ತೆ ಎಂದು ತಿಳಿಸಿದರು.

ನಾನು 4-5 ವರ್ಷಗಳಿಂದ ಹೆಚ್ಚು ಯಾರನ್ನೂ ಭೇಟಿಯಾಗುತ್ತಿಲ್ಲ. ನನಗೆ ಬೇರೆ ಕಡೆ ಸಂತೋಷ ಸಿಗುತ್ತಿದೆ, ಅದರ ಬಳಿ ಹೆಚ್ಚು ಒಲವು ತೋರಿಸುತ್ತಿದ್ದೇನೆ. ಆದರೆ ಈತನ ಸಾವಿನ ಸುದ್ದಿ ಕೇಳಿದ ಮೇಲೆ ನನಗೆ ಇದ್ದ 20-30% ಆಶಾಭಾವ ಹೋಯಿತು. ಆದರೆ ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಾಪಸ್ ಬರುತ್ತಾನೆ!

ಭಗವದ್ಗೀತೆಯಲ್ಲಿ ಸಾವು ದೇಹಕ್ಕೆ ಮಾತ್ರ, ಆತ್ಮಕ್ಕೆ ಅಲ್ಲ ಎಂದು ಶ್ರೀಕೃಷ್ಣ ಬಹಳ ಸ್ಪಷ್ಟವಾಗಿ ಹೇಳಿದ್ದಾನೆ. ಪುನೀತ್ ಈಗ ರಾಜ್‍ಕುಮಾರ್ ಬಟ್ಟೆಯನ್ನು ಕಳಚಿ ಹೋಗಿದ್ದಾನೆ. ಮತ್ತೆ ವಾಪಸ್ ಬರುತ್ತಾನೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

ಕಲಾವಿದ ಅದೃಷ್ಟವಂತ ಎಂಬುದಕ್ಕೆ ಪುನೀತ್ ನಿದರ್ಶನವಾಗಿದೆ. ಕಲಾವಿದ ಸತ್ತರೂ ನೂರಾರು ವರ್ಷ ನೆನಪಿನಲ್ಲಿ ಉಳಿಯುತ್ತಾನೆ. ಅದೇ ದೇವರು ಒಬ್ಬ ಕಲಾವಿದನಿಗೆ ಕೊಟ್ಟ ದೊಡ್ಡ ಉಡುಗೂರೆಯಾಗಿದೆ. ಅದಕ್ಕೆ ಆತ ಮಾಡಿದಂತಹ ಕೆಲಸ, ಹಾಡಿದಂತಹ ಮಾತು ಎಲ್ಲವೂ ನಮ್ಮ ಬಳಿಯೇ ಇರುತ್ತೆ. ಆತನಿಗೆ ಶ್ರದ್ಧಾಂಜಲಿ ಹೇಳಲು ನನಗೆ ಮನಸ್ಸಿಲ್ಲ. ನಾನು ಹೇಳುವುದಿಲ್ಲ. ಅವನು ಮತ್ತೆ ವಾಪಸ್ಸು ಬರುತ್ತಾನೆ ಎಂದು ತಿಳಿಸಿದರು.

ಆತ ಇದ್ದಾಗ ಯಾರಿಗೂ ಏನೂ ತಿಳಿಯಲಿಲ್ಲ. ಆದರೆ ಆತ ಹೋದ ನಂತರ ಜಗತ್ತಿನಲ್ಲಿ ಎಲ್ಲವೂ ನಶ್ವರ. ದೇವರು ಎಂಬವನು ಒಂದು ಕರೆಯನ್ನು ಕೊಟ್ಟಾಗ ಎಲ್ಲವನ್ನು ಬಿಟ್ಟು ಹೋಗಬೇಕು ಎನ್ನುವ ಒಂದು ಸಣ್ಣ ಸಂದೇಶವನ್ನು ನಮಗೆ ಹೇಳಿಕೊಟ್ಟಿದ್ದಾನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *