ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಕಾಡಾನೆಗಳ ಹಿಂಡು

Public TV
1 Min Read

ಮಡಿಕೇರಿ: ಕಾಡಾನೆಯೊಂದು ಮೊನ್ನೆಯಷ್ಟೇ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿತ್ತು. ಈ ಬೆನ್ನಲ್ಲೇ ಕಾಡಾನೆಗಳ ಹಿಂಡೊಂದು ಸೋಮವಾರಪೇಟೆ ತಾಲೂಕಿನಲ್ಲಿ ಇಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತೂರು ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡೊಂದು ನುಗ್ಗಿ ದಾಂಧಲೆ ನಡೆಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮಸ್ಥರಿಗೆ ಆನೆಗಳು ಕಾಣಿಸಿದ್ದವು. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿತ್ತು. ಅದೃಷ್ಟವಶಾತ್ ಗ್ರಾಮಕ್ಕೆ ನುಗ್ಗಿ ಯಾವುದೇ ಹಾನಿ ಉಂಟು ಮಾಡಿಲ್ಲ.

ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಇಂದು ಗ್ರಾಮಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಾಯದೊಂದಿಗೆ ಆನೆಗಳನ್ನು ಕಾಡಿಗೆ ಅಟ್ಟಿದರು.

ವಿರಾಜಪೇಟೆ ತಾಲೂಕಿನ ಕುರ್ಚಿ ಗ್ರಾಮದ ತೋಟದ ಬಳಿ ನಡೆದುಕೊಂಡು ಬರುತ್ತಿದ್ದ ಕೂಲಿ ಕಾರ್ಮಿಕ ಮಾರಾ ಎಂಬವರ ಮೇಲೆ ಆನೆಯೊಂದು ಏಪ್ರಿಲ್ 17ರಂದು ದಾಳಿ ಮಾಡಿತ್ತು. ಆನೆ ದಾಳಿಯ ರಭಸಕ್ಕೆ ಎಡಗಾಲು ಸೀಳಿ ಹೋಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *