ಹೊಲದಲ್ಲಿ ಮಲಗಿದ್ದ ರೈತನನ್ನು ಸೊಂಡಿಲಿನಿಂದ ದೂಡಿದ ಒಂಟಿ ಸಲಗ

Public TV
1 Min Read

ಕಾರವಾರ: ಗೋವಿನ ಜೋಳದ ಬೆಳೆಯನ್ನು ಕಾಯಲು ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಆನೆ ದಾಳಿ ಮಾಡಿದ್ದು, ರೈತ ಪ್ರಾಣಾಪಾಯದಿಂದ ಪಾರಾದ ಘಟನೆ ಮುಂಡಗೋಡು ತಾಲೂಕಿನ ನಂದಿಗಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸನಾಳ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

ದೊಂಡು ವಿಟ್ಟು ಏಡಗೆ(65) ಆನೆ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾದ ರೈತ. ದೊಂಡು ಅವರು ಬಸನಾಳ ಗ್ರಾಮದವರಾಗಿದ್ದು, ತಮ್ಮ ಹೋಲದಲ್ಲಿ ಗೋವಿನ ಜೋಳವನ್ನು ಬೆಳೆದಿದ್ದಾರೆ. ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ರಾತ್ರಿ ತಮ್ಮ ಹೊಲದಲ್ಲಿರುವ ಒಣ ಹುಲ್ಲಿನ ಬಣವಿಯ ಪಕ್ಕದಲ್ಲಿ ಮಲಗಿದ್ದರು. ರೈತನ ಹೊಲ ಅರಣ್ಯ ಪಕ್ಕದಲ್ಲಿರುವುದರಿಂದ ಆಕಸ್ಮಿಕವಾಗಿ ರಾತ್ರಿ ಸಮಯದಲ್ಲಿ ಒಂಟಿ ಸಲಗ ಹೊಲಕ್ಕೆ ಬಂದಿದೆ.

ಹೊಲದಲ್ಲಿ ಭತ್ತದ ಬಣವೆ ಇದೆ ಎಂದು ಭಾವಿಸಿ ತಿನ್ನಲು ಬಂದಿದೆ. ಆದರೆ ಅದು ಹುಲ್ಲಿನ ಬಣವೆ ಆಗಿದ್ದರಿಂದ ತನ್ನ ಸೊಂಡಿಲಿನಿಂದ ತಿವಿದು ಹಾಳು ಮಾಡಿದೆ. ಅಲ್ಲದೆ ಅದರ ಪಕ್ಕದಲ್ಲಿ ಮಲಗಿದ್ದ ರೈತ ದೊಂಡುವನ್ನು ತನ್ನ ಸೊಂಡಿಲಿನಿಂದ ದೂಡಿ ದಾಳಿ ಮಾಡಿದೆ. ಈ ವೇಳೆ ರೈತ ತಪ್ಪಿಸಿಕೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಆನೆ ಬಂದ ಬಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಆನೆ ದಾಳಿಯಿಂದ ಗಾಯವಾದ ದೊಂಡು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *