ಡೆಹ್ರಾಡೂನ್: ದೇವ ಭೂಮಿ ಉತ್ತರಾಖಂಡದಲ್ಲಿಯೂ ಕೇಸರಿ ಹವಾ ಮುಂದುವರೆದಿದೆ. ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದರೂ ಅದು ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ಒಂದೇ ಪಕ್ಷ ಸತತ ಎರಡನೇ ಬಾರಿಗೆ ಸರ್ಕಾರ ರಚನೆ ಮಾಡುತ್ತಿರುವುದು ಉತ್ತರಾಖಂಡ್ನ 22 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು.
ಇಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಸೋತರೂ, ಮೋದಿ ಅಲೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಇಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬುಡಮೇಲಾಗಿವೆ. ಕಾಂಗ್ರೆಸ್ ಲೆಕ್ಕಾಚಾರವೂ ಹಳಿ ತಪ್ಪಿದೆ.
ಬಿಜೆಪಿಗೆ ಬಿಗ್ ಫೈಟ್ ನೀಡಬಹುದು, ಹರೀಶ್ ರಾವತ್ ನೇತೃತ್ವದಲ್ಲಿ ಸರ್ಕಾರವನ್ನು ರಚನೆ ಮಾಡಬಹುದು ಎಂದೇ ಎಲ್ಲರೂ ಲೆಕ್ಕ ಹಾಕಿದ್ದರು. ಆದರೆ ಕಾಂಗ್ರೆಸ್ನಲ್ಲಿನ ಒಳ ಜಗಳ ಆ ಪಕ್ಷವನ್ನು ಅಲ್ಲಿಯೂ ಬಲಿ ತೆಗೆದುಕೊಂಡಿದೆ. ಕಾಂಗ್ರೆಸ್ನ ಪ್ರಮುಖ ನಾಯಕ ಹರೀಶ್ ರಾವತ್ ಅವರೇ ಸೋತು ಮನೆ ಸೇರಿದ್ದಾರೆ. ಇಲ್ಲಿ ಬಿಜೆಪಿ ಚುನಾವಣೆ ಉಸ್ತುವಾರಿ ವಹಿಸಿದ್ದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ
ಉತ್ತರಾಖಂಡದಲ್ಲಿ ಮತ್ತೆ ಕಮಲ
ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
ಬಿಜೆಪಿ – 47
ಕಾಂಗ್ರೆಸ್ – 19
ಬಿಎಸ್ಪಿ – 02
ಎಎಪಿ – 00
ಇತರರು – 02
2017ರ ಫಲಿತಾಂಶ
ಬಿಜೆಪಿ 57, ಕಾಂಗ್ರೆಸ್ 11, ಇತರರು 2