ಚಿಕ್ಕಬಳ್ಳಾಪುರ: ನಾನು ಎಂಎಲ್ಎ ಆದರೆ ಕ್ಷೇತ್ರದ ಜನತೆಗೆ ಉಚಿತವಾಗಿ ಮದ್ಯ, ಊಟ, ಮಟನ್, ಸ್ಕೂಲ್, ಆಸ್ಪತ್ರೆ, ಮೊಬೈಲ್ ಡೇಟಾ, ಹೀಗೆ 11 ಆಫರ್ ನೀಡಿ ಪ್ರಚಾರ ಮಾಡಿದ್ದ ಅಭ್ಯರ್ಥಿ ವಿರುದ್ಧ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಯನಮಲಪಾಡಿ ಗ್ರಾಮದ ವೈ.ಎನ್ ಸುರೇಶ್ ಎಂಬಾತ ತಾನು ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ನಾನು ಎಂಎಲ್ಎ ಯಾಕೆ? ಆಗಬಾರದು ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ನ್ನು ಮುದ್ರಿಸಿ ಪ್ರಚಾರ ನಡೆಸಿದ್ದ. ಈ ಪೋಸ್ಟರ್ ನಲ್ಲಿ ಕ್ಷೇತ್ರದ ಜನತೆಗೆ ಚಿತ್ರ ವಿಚಿತ್ರ ಫ್ರೀ ಆಫರ್ ಗಳನ್ನು ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು.
ಈ ಸಂಬಂಧ ಕ್ರಮಕೈಗೊಳ್ಳಲು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿ ಇರುವ ವೇಳೆಯಲ್ಲಿ ಮತದಾರರಿಗೆ ಅಮಿಷ ನೀಡಿದ ಆರೋಪದಲ್ಲಿ ಸದ್ಯ ಸುರೇಶ್ ವಿರುದ್ಧ ದೂರು ದಾಖಲಿಸಲಾಗಿದೆ.