ಗಂಡಂದಿರನ್ನು ಗೆಲ್ಲಿಸಲು ಪ್ರಚಾರದ ಕಣಕ್ಕಿಳಿದ ಪತ್ನಿಯರು

Public TV
2 Min Read

ಕೋಲಾರ: ಚುನಾವಣೆ ಬಂದರೆ ಸಾಕು ಅಭಿಮಾನಿಗಳು, ಕಾರ್ಯಕರ್ತರು ಮನೆ ಮನೆ ತೆರಳಿ ಮತ ಕೇಳುತ್ತಾರೆ. ಆದರೆ ಕೋಲಾರದಲ್ಲೊಂದು ಕ್ಷೇತ್ರ ತದ್ವಿರುದ್ದ ತಮ್ಮ ಗಂಡನನ್ನ ಗೆಲ್ಲಿಸಿ ಅಂತಾ ಗಂಡಂದಿರ ಪರವಾಗಿ ಹೆಂಡತಿಯರು ಹಗಲು ರಾತ್ರಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಪತ್ನಿ ಆರಿದ್ರಾ ಪತಿಯ ಪರ ಕ್ಷೇತ್ರದ 150 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡರ ಪತ್ನಿ ರತ್ನಮ್ಮ ಭರ್ಜರಿ ಕ್ಯಾಂಪೇನ್ ಮಾಡುತ್ತಾ ಪತಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ.

2018 ರ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಜಿದ್ದಾಜಿದ್ದಿನ ಕಣಕ್ಕೆ ಕೋಲಾರದಲ್ಲೂ ಮೂರು ಪಕ್ಷಗಳ ನಾಯಕರು ಭರ್ಜರಿ ತಯಾರಿಯಲ್ಲಿದ್ದಾರೆ. ಅದರಂತೆ ಸ್ಟಾರ್ ಕ್ಯಾಂಪೇನರ್ ಗಳನ್ನ ಕ್ಷೇತ್ರಕ್ಕೆ ಕರೆ ತಂದು ತಮ್ಮ ಪರ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಆದರೆ ಮಾಲೂರು ಕ್ಷೇತ್ರದಲ್ಲಿ ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನ ಮಾಡಲಾಗುತ್ತಿದೆ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಮನೆಯಲ್ಲಿ ಕುಳಿತುಕೊಳ್ಳದ ಅಭ್ಯರ್ಥಿಗಳ ಪತ್ನಿಯರು ಗಂಡಂದಿರನ್ನ ಗೆಲ್ಲಿಸಿಕೊಳ್ಳಲು ಭರ್ಜರಿ ಮತ ಬೇಟೆಯಲ್ಲಿ ತೊಡಗಿದ್ದಾರೆ.

ಜನ ಸೇವೆಯ ಜೊತೆಗೆ ತಮ್ಮ ಪತಿಯರು ಮಾಡಿರುವ ಅಭಿವೃದ್ಧಿಗಳನ್ನ ಹೇಳಿಕೊಂಡು ಮತ ಪಡೆಯಲು ಮುಂದಾಗಿದ್ದಾರೆ. ಕಳೆದ ಹಲವು ತಿಂಗಳಿನಿಂದ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಪತ್ನಿ ಆರಿದ್ರಾ, ಪತಿಯ ಪರ ಕ್ಷೇತ್ರದಲ್ಲಿ ಮಿಂಚಿನ ಓಡಾಟ ಆರಂಭಿಸಿದ್ದಾರೆ. ಮೊದಲಿನಿಂದಲೂ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಾಸಕರ ಪತ್ನಿ ಆರಿದ್ರಾ, ಈಗಾಗಲೇ ಕ್ಷೇತ್ರದಲ್ಲಿನ 150 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ, ತನ್ನ ಪತಿ ಮಾಡಿರುವ ಅಭಿವೃದ್ಧಿಗಳನ್ನ ಜನರಿಗೆ ತಿಳಿಸುತ್ತಾ, ಜನರೊಂದಿಗೆ ಬೆರೆತು ಜನರ ಸಮಸ್ಯೆಗಳನ್ನ ಖುದ್ದು ಆಲಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಪತ್ನಿ ರತ್ನಮ್ಮ ಯಾರಿಗೂ ಕಡಿಮೆ ಇಲ್ಲದಂತೆ ಕ್ಷೇತ್ರದ ಜನರಿಗೆ ಹತ್ತಿರವಾಗುತ್ತಿದ್ದಾರೆ. ಜನರ ಸಮಸ್ಯೆ ಆಲಿಸಲು ಪತಿಯೊಂದಿಗೆ ಹಾಗೂ ತಮ್ಮದೇ ಆದ ಟೀಂ ನೊಂದಿಗೆ ಗ್ರಾಮಗಳಿಗೆ ತೆರಳಿ ಪತಿಯ ಪರವಾಗಿ ಕಳೆದ ಒಂದು ತಿಂಗಳಿನಿಂದ ಮಿಂಚಿನ ಓಡಾಟ ಆರಂಭಿಸಿದ್ದಾರೆ. ಜನರೊಂದಿಗೆ ಬೆರೆತು ತಮ್ಮ ಕಷ್ಟ ಸುಖಗಳನ್ನ ಆಲಿಸುತ್ತಿದ್ದಾರೆ. ಪತಿಗಿಂತಲೂ ಒಂದು ಹೆಜ್ಜೆ ಮಹಿಳೆಯರು, ಹಿರಿಯರ ಪ್ರೀತಿ ವಿಶ್ವಾಸ ಗಳಿಸಿರುವ ರತ್ನಮ್ಮ ಪತಿಯ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು, ಸರಳವಾಗಿ ಜನರೊಂದಿಗೆ ನಡೆದುಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *