ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್ – ಡಿಕೆಶಿ, ಡಿಕೆಸು, ಕುಸುಮ, ಹನುಮಂತರಾಯಪ್ಪ ವಿರುದ್ಧ ದೂರು

Public TV
1 Min Read

– ಆರೋಪಿಗಳ ಹೆಸರು ನಮೂದಿಸದೇ ಪೊಲೀಸರಿಂದ ಝೀರೋ ಎಫ್‌ಐಆರ್ ದಾಖಲು

ಬೆಂಗಳೂರು: ಶಾಸಕ ಮುನಿರತ್ನ (Muniratna) ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಹಾಗೂ ಹನುಮಂತರಾಯಪ್ಪ ವಿರುದ್ಧ ಮುನಿರತ್ನ ಅವರು ದೂರು ನೀಡಿದ್ದಾರೆ. ಆದರೆ, ನಂದಿನಿ ಲೇಔಟ್ ಠಾಣೆ ಪೊಲೀಸರು ಯಾರ ಹೆಸರನ್ನೂ ಉಲ್ಲೇಖಿಸದೇ ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ.

ಮುನಿರತ್ನ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆ ಮಾಡುವ ಮುಂದುವರೆದ ಭಾಗವಾಗಿ ಸಂಚಿನಂತೆ ಮೊಟ್ಟೆ ಎಸೆಯಲಾಗಿದೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಸಂಚು, ಆಸೀಡ್‌ ದಾಳಿ : ಮುನಿರತ್ನ

ನಿನ್ನೆ ನಡೆದ ಘಟನೆ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಲ್ಲೆ ಮಾಡಿದವರ ಹೆಸರು ಅಪರಿಚಿತರು ಅಂತ ಎಫ್‌ಐಆರ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಯಾವ ಆರೋಪಿಗಳ ಹೆಸರೂ ಉಲ್ಲೇಖಿಸದೇ ಝೀರೋ ಎಫ್‌ಐಆರ್ ದಾಖಲಾಗಿದೆ.

ಶಾಸಕರ ಹೇಳಿಕೆ ದಾಖಲಿಸಿ, ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷ ಸಾಕ್ಷಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಮೊಬೈಲ್ ವೀಡಿಯೊಗಳ ಸಂಗ್ರಹಿಸಲಾಗಿದೆ. ಸಿಸಿಟಿವಿ ವೀಡಿಯೊಗಳನ್ನ ಸಹ ಪೊಲೀಸರು ಸಂಗ್ರಹಿಸಿದ್ದಾರೆ. ಆದರೆ, ಮೊಟ್ಟೆ ಎಸೆದವರ ಬಗ್ಗೆ ವೀಡಿಯೊಗಳಲ್ಲಿ ದಾಖಲಾಗಿಲ್ಲ. ಹೀಗಾಗಿ ಸಾಕ್ಷಿಗಳ ಹೇಳಿಕೆ ಮೇಲೆ ತನಿಖೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಮುನಿರತ್ನರ ಕೂದಲು ಸ್ವಲ್ಪ ಸುಟ್ಟಿದೆ: ಮೊಟ್ಟೆ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಸಂಸದ ಡಾ.ಮಂಜುನಾಥ್‌

ಮೊಟ್ಟೆ ಎಸೆದವರು ಎಂದು ಆರೋಪ ಹೊತ್ತವರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ. ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎಂಬವರು ದೂರು ನೀಡಿದ್ದಾರೆ.

Share This Article