ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಪಾಳು ಬಿದ್ದ ಶಿಕ್ಷಕರ ವಸತಿ ಗೃಹ

Public TV
2 Min Read

– ಶಿಕ್ಷಕರ ವಸತಿ ಗೃಹದಲ್ಲಿ ಅನೈತಿಕ ಚಟುವಟಿಕೆ

ಚಾಮರಾಜನಗರ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರಿಗಾಗಿ ಗ್ರಾಮಗಳಲ್ಲಿ ವಸತಿ ಗೃಹ ನಿರ್ಮಿಸಲಾಗಿರುತ್ತದೆ. ಆದರೆ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಉಸ್ತುವಾರಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿದೆ. ಅಷ್ಟೇ ಅಲ್ಲದೆ ವಸತಿ ಗೃಹಗಳು ಅನೈತಿಕ ಚಟುವಟಿಗಳ ಕೇಂದ್ರವಾಗಿ ಮಾರ್ಪಟ್ಟಿವೆ.

ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಂಗಳ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗಾಗಿ 2015ರಲ್ಲಿ ವಸತಿ ಗೃಹಗಳನ್ನ ನಿರ್ಮಿಸಲಾಗಿದೆ. ಅಂದಿನ ಸ್ಥಳೀಯ ಶಾಸಕ, ಸಚಿವರಾಗಿದ್ದ ದಿವಂಗತ ಮಹದೇವ ಪ್ರಸಾದ್ ಅವರು, ಸುಮಾರು 8 ಕುಟುಂಬ ವಾಸಿಸುವ ಸುಸಜ್ಜಿತ ಶಿಕ್ಷಕರ ವಸತಿ ಗೃಹವನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದರು. ಉದ್ಘಾಟನೆಯಾದ 4 ವರ್ಷಗಳಲ್ಲಿ ಕಟ್ಟಡ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಶಿಕ್ಷಕರು ಯಾರೂ ವಾಸಮಾಡಲು ಮುಂದೆ ಬಾರದ ಕಾರಣ ಅದು ಹಾಗೆ ಪಾಳು ಬಿದ್ದು ಕುಡುಕರ, ಜೂಜುಕೋರರ ಕೇಂದ್ರವಾಗಿ ಸುತ್ತ ಮುತ್ತಲಿನ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇದರಿಂದಾಗಿ ಸ್ಥಳೀಯರು ಶಿಕ್ಷಣ ಇಲಾಖೆಯ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಒಂದು ಕೋಟಿ ರೂಪಾಯಿ ವೆಚ್ದದಲ್ಲಿ ಕಟ್ಟಿದ ವಸತಿ ಗೃಹದಲ್ಲಿ ಯಾರು ವಾಸವಿಲ್ಲದೆ ಇರುವುದರಿಂದ ಪಾಳು ಬಿದ್ದು ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದನ್ನ ಸರಿಪಡಿಸಬೇಕಿದೆ. ಪಾಳು ಬಿದ್ದು ಅನೈತಿಕ ಚಟುವಟಿಕೆ ಕೇಂದ್ರವಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದೇನೆ. ಕಟ್ಟಡ ಈಗ ದುರಸ್ತಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಕಟ್ಟಡ ದರುಸ್ತಿಯ ಬಳಿಕ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಸರ್ಕಾರ ಯಾವುದೇ ಇಲಾಖೆಯ ಸಿಬ್ಬಂದಿ ತಾವು ಕೆಲಸ ಮಾಡುವ ಸ್ಥಳದಲ್ಲೇ ಇದ್ದು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವ ಸಲುವಾಗಿ ವಸತಿ ಗೃಹಗಳನ್ನ ನಿರ್ಮಾಣ ಮಾಡಲಾಗುತ್ತದೆ. ಆದರೆ ನಗರ ಪ್ರದೇಶಗಳ ವ್ಯಾಮೋಹಕ್ಕೆ ಒಳಗಾಗುವ ಸರ್ಕಾರಿ ನೌಕರರು ಬಾಡಿಗೆ ತೆತ್ತಾದರೂ ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನಾದರೂ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುವ ವಸತಿ ಗೃಹಗಳಲ್ಲೇ ಆಯಾ ಇಲಾಖೆಯ ನೌಕರರು ಕಡ್ಡಾಯವಾಗಿ ವಾಸ ಮಾಡುವಂತೆ ಕಟ್ಟಿನಿಟ್ಟಿನ ಕ್ರಮವಹಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *