ಧೈರ್ಯವಾಗಿ ಪರೀಕ್ಷೆ ಎದುರಿಸಿ- ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಸಲಹೆ

Public TV
2 Min Read

ಬೆಂಗಳೂರು: ಪರೀಕ್ಷೆ ಆತಂಕ ನಿವಾರಣೆ ಮಾಡೋಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹತ್ತು ಹಲವು ಸಲಹೆಗಳನ್ನ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ದ್ವೀತಿಯ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧ ಮಕ್ಕಳ ಆತಂಕ ನಿವಾರಣೆ ಮಾಡಲು ಸಂವೇದನಾ ಫೋನ್ ಇನ್ ಕಾರ್ಯಕ್ರಮವನ್ನ ಸಚಿವ ಸುರೇಶ್ ಕುಮಾರ್ ನಡೆಸಿದ್ರು. ಫೋನ್ ಮೂಲಕ ಸಚಿವರಿಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಅಂತ ಸಚಿವರು ತಿಳಿಸಿದರು.

ಸುಮಾರು 36 ವಿದ್ಯಾರ್ಥಿಗಳು ಸಚಿವರಿಗೆ ಫೋನ್ ಮಾಡಿ 42 ಪ್ರಶ್ನೆಗಳನ್ನ ಪರೀಕ್ಷೆ ಸಂಬಂಧ ಕೇಳಿದ್ರು. ಎಲ್ಲರಿಗೂ ಸಮಾಧಾನದಿಂದ ಉತ್ತರ ಕೊಟ್ಟ ಸಚಿವರು, ಪರೀಕ್ಷೆ ಬರೆಯಲು ಧೈರ್ಯ ತುಂಬಿದ್ರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿಧಾನದ ಬಗ್ಗೆ ಅನೇಕ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಸುರೇಶ್ ಕುಮಾರ್, ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶ್ನೆಗಳು ಇರುತ್ತವೆ. ಪ್ಯಾಟರ್ನ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಎಸ್‍ಎಸ್‍ಎಲ್‍ಸಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಣಿತ ಮತ್ತು ಆಂಗ್ಲ ಪತ್ರಿಕೆಗಳಿಗೆ ಉತ್ತರಿಸುವ ಸಮಯವನ್ನು ಹೆಚ್ಚಿಸಲಾಗಿದೆ ಅಂತ ತಿಳಿಸಿದ್ರು.

ಪಠ್ಯದ ಮಧ್ಯಭಾಗದಿಂದ ಪ್ರಶ್ನೆ ಕೇಳಿದರೆ ಉತ್ತರಿಸುವುದು ಕಷ್ಟವಾಗುತ್ತದೆ ಅಂತ ವಿದ್ಯಾರ್ಥಿಯೊಬ್ಬ ಸಚಿವರ ಬಳಿ ಹೇಳಿದ್ದಾನೆ. ಇದಕ್ಕೆ ಉತ್ತರ ನೀಡಿದ ಸಚಿವರು, ಇಡೀ ಪಾಠವನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ಬರೆಯಬಹುದು. ಅಂತಹ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಅಂತ ಸಲಹೆ ನೀಡಿದ್ರು. ಕೆಲವರು ನಾನು ಚೆನ್ನಾಗಿ ಓದುತ್ತೇನೆ, ಪರೀಕ್ಷಾ ಕೊಠಡಿಗೆ ಹೋದಾಗ ಹೆದರಿಕೆಯಾಗುತ್ತೆ ಏನ್ ಮಾಡಬೇಕು ಸರ್ ಅಂತ ಸಚಿವರಿಗೆ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ನೀನು ಚೆನ್ನಾಗಿ ಓದಿದ ಮೇಲೆ ಹೆದರುವ ಅಗತ್ಯವೇ ಇರುವುದಿಲ್ಲ, ನೀನು ಚೆನ್ನಾಗಿ ಓದು, ಧೈರ್ಯದಿಂದ ಪರೀಕ್ಷೆ ಬರೆ, ಪಾಸಾಗುತ್ತೀಯಾ ಅಂತ ಧೈರ್ಯ ತುಂಬಿದ್ರು.

ಇದಲ್ಲದೆ ಮಕ್ಕಳು ಚೆನ್ನಾಗಿ ಓದಬೇಕು. ಆರೋಗ್ಯ ಕಾಪಾಡಿಕೊಳ್ಳಿ. ಬೆಳಗ್ಗೆ ಬೇಗ ಎದ್ದು ಸಮಯ ವಿಭಜಿಸಿಕೊಂಡು ಓದಬೇಕು. ಪರೀಕ್ಷಾ ಕೊಠಡಿಯನ್ನ ಒಂದು ಆಟದ ಮೈದಾನ ಅಂತ ತಿಳಿದುಕೊಳ್ಳಬೇಕು. ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ಉಳಿದ ಪ್ರಶ್ನೆಗಳಿಗೆ ಗಮನಹರಿಸಿ ಅಂತ ಸಚಿವರು ಮಕ್ಕಳಿಗೆ ಸಲಹೆ ಕೊಟ್ರು.

Share This Article
Leave a Comment

Leave a Reply

Your email address will not be published. Required fields are marked *