ಇಡಿಯಿಂದ ಸ್ಯಾಂಡಲ್‌ವುಡ್‌ ನಿರ್ಮಾಪಕ ಆನಂದ್ ಅಪ್ಪುಗೋಳ್ ಅರೆಸ್ಟ್

Public TV
3 Min Read

ನವದೆಹಲಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 250 ಕೋಟಿ ರೂಪಾಯಿ ವಂಚನೆ ಎಸಗಿದ ಆರೋಪ ಅಪ್ಪುಗೋಳ್ ಮೇಲಿದ್ದು, ಇಡಿ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿತ್ತು. ಗ್ರಾಹಕರಿಂದ ಠೇವಣಿಯಾಗಿ ಪಡೆದ ಕೋಟ್ಯಂತರ ರೂಪಾಯಿಯನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

2020ರಲ್ಲಿ ಅಪ್ಪುಗೋಳ್‌ ಒಡೆತನದಲ್ಲಿದ್ದ 31.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದಿರುವುದಾಗಿ ಇಡಿ ತಿಳಿಸಿತ್ತು. ಅಪ್ಪುಗೋಳ್‌ ಅವರ ಹನುಮಾನ್‌ ನಗರದಲ್ಲಿನ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿನ ಜಾಗ, ತಾಲ್ಲೂಕಿನ ಬಿ.ಕೆ. ಬಾಳೇಕುಂದ್ರಿಯಲ್ಲಿನ ಮನೆ ಮತ್ತು ನೆಹರೂ ನಗರದಲ್ಲಿನ ಕಚೇರಿ ಹಾಗೂ ಅವರ ಹೆಸರಿನಲ್ಲಿನ ಬ್ಯಾಂಕ್ ಖಾತೆಗಳನ್ನು ಪಡೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಸರ್ಕಾರದ ಶಾಕ್‌ – ವೀಕೆಂಡ್‌ ಕರ್ಫ್ಯೂ ವೇಳೆ ಮದ್ಯ ಮಾರಾಟಕ್ಕೆ ಬ್ರೇಕ್‌

ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿದ್ದ ಅಪ್ಪುಗೋಳ್ ಅವರು ಸಾರ್ವಜನಿಕರ ಠೇವಣಿ ಹಣವನ್ನು ಸಕಾಲಕ್ಕೆ ಪಾವತಿಸದೆ ಗ್ರಾಹಕರಿಗೆ ವಂಚನೆ ಮಾಡಿರುವ ಕುರಿತು ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಪ್ಪುಗೋಳ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು.

ಸಿಐಡಿ ಡಿವೈಎಸ್‌ಪಿ ಪುರುಷೋತ್ತಮ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಬರೋಬ್ಬರಿ 2063 ಪುಟಗಳ ಚಾರ್ಜ್‌ಶೀಟ್‌ ಅನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಕರಣದಲ್ಲಿ ಒಟ್ಟು 13 ಜನರು 275 ಕೋಟಿ ರೂ. ಠೇವಣಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ವಾಪಸ್ ಇಲ್ಲವೇ ಇಲ್ಲ: ಸಿಎಂ ಸ್ಪಷ್ಟನೆ

ಸಂಗೊಳ್ಳಿ ರಾಯಣ್ಣ ಸೊಸೈಟಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದಿದ್ದು, 26 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿತ್ತು. ಆನಂದ ಅಪ್ಪುಗೋಳ ಸೇರಿ ಸೊಸೈಟಿಯ 13 ನಿರ್ದೇಶಕರು ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ಈ ಕುರಿತು ಸಹಕಾರ ಇಲಾಖೆ ನಿಬಂಧಕರು 2017 ರಲ್ಲಿ ದೂರು ದಾಖಲಿಸಿದ್ದರು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದ  ಅವಧಿಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.

ಆರೋಪ ಏನು?
ರಾಯಣ್ಣ ಸೊಸೈಟಿಯ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಆರೋಪದಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಆನಂದ ಅಪ್ಪುಗೋಳ್ ಸೇರಿ ಆಡಳಿತ ಮಂಡಳಿ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು. ನಂತರದಲ್ಲಿ ಕೆಲ ಕಾಲ ತಲೆಮರೆಸಿಕೊಂಡಿದ್ದ ಅಪ್ಪುಗೋಳ್ ಅವರನ್ನು 2018ರ ಸೆ.17 ರಂದು ಪೊಲೀಸರು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ನೋಟ್ ಬ್ಯಾನ್ ಆದ ನಂತರ ಸುಧಾರಿಸಿಕೊಳ್ಳಲಾಗದೇ ಬ್ಯಾಂಕ್‍ನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಸುಮಾರು 300 ಕೋಟಿ ರೂಪಾಯಿ ಠೇವಣಿ, 50 ಸಾವಿರ ಖಾತೆ ಹಾಗೂ 50 ಶಾಖೆ ಹೊಂದಿದ್ದ ಸೊಸೈಟಿ ಆರ್ಥಿಕವಾಗಿ ರೋಗಗ್ರಸ್ಥವಾದ ಹಿನ್ನೆಲೆಯಲ್ಲಿ ಗ್ರಾಹಕರು ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ್ದರು.

ಇದಕ್ಕೂ ಮುನ್ನ ಪ್ರಕರಣದ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಆನಂದ ಅಪ್ಪುಗೋಳ್ ಅವರು, ಶೇ.35 ರಷ್ಟು ಹಣವನ್ನು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದೇವೆ. ಇದರಿಂದಾಗಿ ನಮಗೆ ಸಂಕಷ್ಟವಾಗಿದೆ. ಗ್ರಾಹಕರು ಯಾರು ಹೆದರುವ ಅವಶ್ಯಕತೆ ಇಲ್ಲ. ನನ್ನ ಸಮಸ್ತ ಆಸ್ತಿಯನ್ನ ಮಾರಿ ನಿಮ್ಮ ಹಣವನ್ನು ನೀಡುತ್ತೇನೆ. ದಯವಿಟ್ಟು ಸ್ವಲ್ಪ ಕಾಲಾವಕಾಶ ಕೊಡಿ. ನಾನು ಸತ್ತರೆ ನಿಮ್ಮೆಲ್ಲರ ಠೇವಣಿ ಹಣವನ್ನು ಕೊಟ್ಟು ಸಾಯುತ್ತೇನೆ. ಆದರೆ ಇವತ್ತು ನಾನು ನನ್ನ ಕುಟುಂಬ ಉಳಿಸಿಕೊಂಡು ಬದುಕಿಲ್ಲ. ನನ್ನ ಕುಟುಂಬ ಅಂದರೆ ಸಂಗೊಳ್ಳಿ ರಾಯಣ್ಣ ಪರಿವಾರ, ಠೇವಣಿದಾರರು ಮತ್ತು ಸಾಲಗಾರರು ಅವರೇ ನನ್ನ ಕುಟುಂಬದವರು. ನಾನು ಎಲ್ಲಿಯೂ ಓಡಿಹೋಗಲ್ಲ, ಸಾಯುವುದಿಲ್ಲ ಸ್ವಲ್ಪ ನನಗೆ ನಿಮ್ಮ ಹಣವನ್ನು ಕೊಡಲಿಕ್ಕೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *