‘ಪುಷ್ಪ 2’ ಪ್ರದರ್ಶನದ ವೇಳೆ ಕಾಲ್ತುಳಿತ: ವಿಷಾದ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ

Public TV
1 Min Read

ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆಗೆ ರಶ್ಮಿಕಾ ಮಂದಣ್ಣ (Rashmika Mandanna) ವಿಷಾದ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೂಲಗಿತ್ತಿಯ ಕಥಾನಕ ‘ತಾಯವ್ವ’ ಶೀರ್ಷಿಕೆ ಅನಾವರಣ

ಡಿ.4ರಂದು ರಾತ್ರಿ ‘ಪುಷ್ಪ 2’ ಸಿನಿಮಾ ಶೋ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆಗ ಓಡುವ ಭರದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಬೆನ್ನಲ್ಲೇ ರಶ್ಮಿಕಾ ಪ್ರತಿಕ್ರಿಯಿಸಿ, ಈ ವಿಚಾರ ಕೇಳಿ ವಿಷಾದವಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಕೂಡ ಪ್ರತಿಕ್ರಿಯೆ ನೀಡಿದೆ. ಕಳೆದ ರಾತ್ರಿಯ ಸ್ಕ್ರೀನಿಂಗ್ ಸಮಯದಲ್ಲಿ ಸಂಭವಿಸಿದ ದುರಂತ ಘಟನೆಯಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಈ ಘಟನೆಯಿಂದ ದುಃಖಿತರಾಗಿರುವ ಕುಟುಂಬಕ್ಕೆ ಶಕ್ತಿ ಕೊಡಲಿ. ಗಂಭೀರ ಸ್ಥಿತಿಯಲ್ಲಿರುವ ಚಿಕ್ಕ ಮಗು ವೈದ್ಯಕೀಯ ಚಿಕಿತ್ಸೆಯಲ್ಲಿದೆ. ಈ ಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲಲು ಮತ್ತು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ನಿರ್ಮಾಣ ಸಂಸ್ಥೆ ತಿಳಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಡಿ.4ರಂದು ಹೈದರಾಬಾದ್‌ನ ಖಖಿಅ ಕ್ರಾಸ್‌ರೋಡ್ಸ್ನ ಸಂಧ್ಯಾ ಥಿಯೇಟರ್‌ನಲ್ಲಿ ಈ ದುರಂತ ಸಂಭವಿಸಿತು. ದಿಲ್‌ಸುಖ್‌ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ರಾತ್ರಿ 10:30ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು. ಪರಿಣಾಮವಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.

Share This Article