ಕಾರವಾರ: ಸಿಒಡಿ ಇನ್ಸ್ಪೆಕ್ಟರ್ ಮಹೇಶ್ ಎಂದು ಹೇಳಿಕೊಂಡು ಮೆಡಿಕಲ್ ಲ್ಯಾಬ್ ಒಂದರ ಮಾಹಿತಿ ಎಗರಿಸಿ, ಬ್ಲಾಕ್ ಮೇಲ್ ಮಾಡುತಿದ್ದ ನಕಲಿ ಸಿಒಡಿ ಇನ್ಸ್ಪೆಕ್ಟರ್ ನನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಕಾನಗೋಡಿನ ಲಕ್ಷ್ಮೀಕಾಂತ ಈಶ್ವರ ನಾಯ್ಕ(32) ಬಂಧಿತ ಆರೋಪಿ. ಈತ ಪೊಲೀಸ್ ಸಮವಸ್ತ್ರ ಹಾಕಿಕೊಂಡು, ನಾನು ಸಿಒಡಿ ಇನ್ಸ್ಪೆಕ್ಟರ್ ಮಹೇಶ್ ಕಾರವಾರದಿಂದ ಬಂದಿದ್ದೇನೆ ಎಂದು ಹೇಳಿಕೊಂಡು ನಗರದ ಶಾಂತಿಕಾ ಲ್ಯಾಬ್ ಗೆ ಹೋಗಿ ಲ್ಯಾಬ್ ದಾಖಲಾತಿಗಳನ್ನು ತಾನು ತಂದ ಕ್ಯಾಮೆರಾದಿಂದ ಫೋಟೋ ತೆಗೆದು ಇನ್ನೊಂದು ಲ್ಯಾಬ್ ಪರಿಶೀಲನೆ ನಡೆಸಿ ಬರುವುದಾಗಿ ಲ್ಯಾಬ್ ಸಿಬ್ಬಂದಿಗೆ ಹೇಳಿ ಮೋಸ ಮಾಡಿ ಹೋಗಿದ್ದಲ್ಲದೆ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.
ಆರೋಪಿಯು ದಾಖಲಾತಿ ಪರಿಶೀಲನೆ ನಡೆಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ತಲೆಗೆ ಹೆಲ್ಮೆಟ್ ಧರಿಸಿದ್ದ ಕಾರಣ ಮುಖ ಚಹರೆ ಗುರುತು ಸಿಕ್ಕಿರಲಿಲ್ಲ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪೊಲೀಸರ ಚುರುಕು ಕಾರ್ಯಚರಣೆಯಿಂದ ಘಟನೆ ನಡೆದ ಒಂದೇ ದಿನದಲ್ಲಿ ಆರೋಪಿ ಸೆರೆ ಸಿಕ್ಕಿದ್ದು, ನ್ಯಾಯಾಲಯಕ್ಕೆ ಇಂದು ಆರೋಪಿಯನ್ನು ಹಾಜರು ಪಡಿಸಲಾಗಿದೆ.
ಆರೋಪಿಯು ಇನ್ನಷ್ಟು ಲ್ಯಾಬ್ಗೆ ಹೋಗಿ ದಾಖಲಾತಿ ಸಂಗ್ರಹಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ.