ದಲಿತ ಮುಖಂಡನ ಕೊಲೆ ಪ್ರಕರಣ – ಐವರು ಶಂಕಿತರು ವಶಕ್ಕೆ

Public TV
2 Min Read

ತುಮಕೂರು: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ದಲಿತ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿ ಕೊಲೆ ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಣಕಾಸು ವಿಚಾರಕ್ಕೆ ಉಂಟಾಗಿದ್ದ ಮನಸ್ತಾಪಕ್ಕೆ ಪ್ರಮುಖ ಆರೋಪಿ ಕಿರಣ್ ಹಾಗೂ ತಂಡ ನರಸಿಂಹಮೂರ್ತಿಯನ್ನು ಕೊಚ್ಚಿ ಕೊಂದಿದ್ದಾರೆ ಎಂಬ ಆರೋಪವಿದೆ. ಸದ್ಯ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

ಗುಬ್ಬಿಯ ಬಿಹೆಚ್ ರಸ್ತೆಯ ಟೀ ಅಂಗಡಿ ಬಳಿ ಕುಳಿತ್ತಿದ್ದ ನರಸಿಂಹಮೂರ್ತಿ ಅವರನ್ನು ಕಾರಿನಲ್ಲಿ ಬಂದ ಐದು ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಭೀಕರ ಕೊಲೆಗೆ ಇಡೀ ಗುಬ್ಬಿ ಪಟ್ಟಣ ಬೆಚ್ಚಿಬಿದ್ದಿತ್ತು. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮುಂಜಾನೆಯೇ ಪೊಲೀಸ್ ಎಸ್ಕಾರ್ಟ್‍ನಲ್ಲಿ ಗುಬ್ಬಿಗೆ ಮೃತದೇಹ ರವಾನಿಸಲಾಗಿದೆ. ಬಳಿಕ ಮಧ್ಯಾಹ್ನ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೃತದೇಹದ ಅಂತಿಮ ದರ್ಶನಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ನರಸಿಂಹಮೂರ್ತಿ ದಲಿತ ಮುಖಂಡರು, ಪ.ಪಂ ಸದಸ್ಯರಾಗಿದ್ದವರು, ಅಂಥವರ ಕೊಲೆ ದಿಗ್ಬ್ರಮೆಗೊಳಿಸಿದೆ. ಈ ಕೊಲೆಗೆ ರಾಜಕೀಯ ಬಣ್ಣ ಕಟ್ಟೋದು ಬೇಡ, ಹಾಡ ಹಗಲೇ ಕೊಲೆ ಆಗಿದೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆದರೂ ಪೊಲೀಸರು ಶಂಕಿತರನ್ನು ಶೀಘ್ರದಲ್ಲೇ ಬಂಧಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರುಗಣಿಸುತ್ತದೆ. ಇಡೀ ಜಿಲ್ಲೆಗೆ ಇದು ಎಚ್ಚರಿಕೆ ಗಂಟೆ ಆಗೋ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ರೈಲು ಸಂಚಾರಕ್ಕೆ ಜೂನ್ 20ರಂದು ಹಸಿರು ನಿಶಾನೆ

ಕೊಲೆ ಬಳಿಕ ಸ್ಥಳಕ್ಕೆ ಎಸ್‍ಪಿ ರಾಹುಲ್ ಕುಮಾರ್ ದೌಡಾಯಿಸಿದ್ದರು. ಕೂಡಲೇ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲವೇ ಗಂಟೆಗಳಲ್ಲಿ ಐದು ಮಂದಿಗೂ ಹೆಚ್ಚು ಆರೋಪಿಗಳನ್ನು ಹೆಡೆಮುರಿಕಟ್ಟಿ ತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮಾಡುತ್ತಿದ್ದೇವೆ. ಯಾರ ಪಾತ್ರ ಯಾವ ರೀತಿ ಇದೆ ಎಂದು ಮಾಹಿತಿ ಕಲೆ ಹಾಕುತಿದ್ದೇವೆ. ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಬಂಧಿತರಲ್ಲಿ ಕೆಲವರು ಸ್ಥಳೀಯರು. ಇನ್ನೂ ಕೆಲವರು ಹೊರಗಡೆಯವರು ಇದ್ದಾರೆ ಎಂದು ಎಸ್‍ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಿಪಟೂರು ಬಳಿ ವಶಕ್ಕೆ ಪಡೆಯಲಾಗಿದೆ. ನರಸಿಂಹಮೂರ್ತಿ ಕೊಲೆ ಪ್ರಕರಣದಲ್ಲಿ ಕಿರಣ್ ಎನ್ನುವಾತ ಪ್ರಮುಖ ಆರೋಪಿ ಎನ್ನಲಾಗ್ತಿದೆ. ನರಸಿಂಹಮೂರ್ತಿ ಹಾಗೂ ಕಿರಣ್ ನಡುವೆ ಈ ಹಿಂದಿನಿಂದಲೂ ಕೆಲ ಭೂ ವಿವಾದಗಳಲ್ಲಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಹಣಕಾಸು ವಿಚಾರಕ್ಕೂ ಇಬ್ಬರ ನಡುವೆ ವೈಮನಸ್ಸು ಬೆಳದಿತ್ತು. ಇದೇ ವಿಚಾರಕ್ಕೆ ಆರೋಪಿ ಕಿರಣ್, ತನ್ನ ಸಹಚರರಾದ ಧೀರಜ್, ಬಸವರಾಜ್, ಫಯಾಜ್ ಒಟ್ಟು ಐವರು ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಕೊಲೆಗೆ ಸಹಕರಿಸಿದ ಇನ್ನೂ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *