ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

Public TV
1 Min Read

ಗಾಂಧಿನಗರ: ಕುಡಿತ ಮತ್ತಿನಲ್ಲೇ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದಿದೆ.

ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಸಾವಿಗೆ ಕಾರಣವಾಗಿದ್ದ ಸೋನಾವಾಲಾ ಆಸ್ಪತ್ರೆಯ ಆರ್‍ಎಂಓ(ರೆಸಿಡೆಂಟ್ ಮೆಡಿಕಲ್ ಆಫೀಸರ್) ಡಾ.ಪರೇಶ್ ಲಖಾನಿ (50)ಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೈದ್ಯ ಕಳೆದ 15 ವರ್ಷಗಳಿಂದ ಸೋನಾವಾಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯ ತನಿಖೆಯನ್ನು ಆರಂಭಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಾಯಿ-ಮಗು ವೈದ್ಯಕೀಯ ಕಾರಣಕ್ಕೆ ಮೃತ ಪಟ್ಟಿದ್ದಾರಾ ಅಥವಾ ವೈದ್ಯನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂಬುದು ಸಾಬೀತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?
ಸೋಮವಾರ ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯನ್ನು ರಾಜ್‍ಕೋಟ್ ನ ಸೋನಾವಾಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಯ ಪರಿಸ್ಥಿತಿಯನ್ನು ಅರಿತ ಡಾ. ಲಖಾನಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದನು. ನಂತರ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಯಿತು.

ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು. ಇತ್ತ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯ ಕುಡಿದ ಅಮಲಿನಲ್ಲಿದ್ದು, ಆತನ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *