ಕಾವೇರಿ ಉಗಮಸ್ಥಾನ ಭಾಗಮಂಡಲದಲ್ಲೂ ಮೂಡಿದ ಬರದ ಛಾಯೆ

Public TV
1 Min Read

ಕೊಡಗು: ಕಳೆದ 44 ವರ್ಷಗಳಿಂದ ಬರವೇ ಬಾರದ ಕೊಡಗಿನಲ್ಲೂ ಈಗ ಕ್ಷಾಮದ ಬಿಸಿ ತಟ್ಟಿದೆ. ದಕ್ಷಿಣ ಕಾಶ್ಮೀರ ಖ್ಯಾತಿಯ ಮಂಜಿನ ನಾಡಲ್ಲೂ ಕೆಂಡದಂಥ ಬಿಸಿಲ ಛಾಯೆ ತಾಂಡವವಾಡುತ್ತಿದೆ. ತಲಕಾವೇರಿಯ ತವರಲ್ಲೀಗ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕಾವೇರಿ ಹುಟ್ಟುವ ತಲಕಾವೇರಿಯ ಭಾಂಗಮಂಡಲದ ತ್ರೀವೇಣಿ ಸಂಗಮದಲ್ಲಿ ನೀರಿಲ್ಲದೇ ಅಲ್ಪ ಪ್ರಮಾಣದ ನೀರಿಗೆ ತಡೆಗೋಡೆಯನ್ನು ಕಟ್ಟಿ ನೀರನ್ನು ಶೇಖರಣೆ ಮಾಡಲಾಗುತ್ತಿದೆ. ಇದರಿಂದ ಬರುವ ಭಕ್ತದಿಗಳಿಗೂ ನೀರಿನ ಸಮಸ್ಯೆ ಎದುರಾಗಿದೆ.

ಕಾವೇರಿ ನದಿ ಉಗಮಸ್ಥಾನ ತಲಕಾವೇರಿಯಲ್ಲೇ ನೀರು ಬತ್ತುತ್ತಿದೆ. ಇಲ್ಲಿನ ಕುಂಡಿಕೆ ಎದುರಿನ ಕೊಳದಲ್ಲಿ ಹಲವು ವರ್ಷಗಳ ಬಳಿಕ ನೀರು ಖಾಲಿಯಾಗಿದೆ. ಹೊಸ ನೀರು ಹರಿಯದ ಕಾರಣ ಕೊಳದಲ್ಲಿನ ನೀರು ವಾಸನೆ ಬರುತ್ತಿದ್ದು, ಭಕ್ತರಿಗೆ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಶೌಚಾಲಯಕ್ಕೆ ಹೋಗಲೂ ನೀರಿನ ಕೊರತೆಯಾಗಿದೆ.

ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿ ಸೇರುವ ಭಾಗಮಂಡಲದ ಪವಿತ್ರ ಸಂಗಮದಲ್ಲಿಯೂ ನೀರಿಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಸಂಗಮದಲ್ಲಿ ಹರಿಯುವ ನೀರಿಗೆ ತಡೆಯೊಡ್ಡಿರಲಿಲ್ಲ. ಇದೀಗ ಇಲ್ಲಿನ ಕಟ್ಟೆಯ ಗೇಟ್ ಮುಚ್ಚಿ ನಿಲ್ಲಿಸಿದ ನೀರಿನಲ್ಲೇ ಭಕ್ತರು ಸ್ನಾನ ಮಾಡುತ್ತಿದ್ದಾರೆ. ಡಿಸೆಂಬರ್ ಬಳಿಕ ತಲಕಾವೇರಿಗೆ ತಿಂಗಳಿಗೆ ಎರಡು ಬಾರಿಯಾದರೂ ಮಳೆ ಬರುತ್ತಿತ್ತು. ಆದರೆ ಡಿಸೆಂಬರ್‍ನಿಂದ ಏಪ್ರಿಲ್ ಆದ್ರೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ತಲಕಾವೇರಿ ಭಾಂಗಮಂಡಲಕ್ಕೆ ತಂಪಾದ ಪ್ರದೇಶ ಎಂಬ ಕಾರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೀಗ ಬಂದರೂ ಇಲ್ಲಿನ ಬಿಸಿಲಿನ ಬೇಗೆ ತಾಳಲಾರದೆ ಹಿಂತಿರುಗುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

1972ರ ಬಳಿಕ ಮೊದಲ ಬಾರಿಗೆ ಇಲ್ಲಿನ ಪ್ರಕೃತಿ ಬದಲಾಗಿದೆ. ಸಾಕಷ್ಟು ಮಳೆ ಬೀಳುವ ಮಡಿಕೇರಿ ತಾಲೂಕನ್ನೂ ಬೇಸಿಗೆ ಹಾಗೂ ಬರ ಆವರಿಸಿಕೊಳ್ಳಿತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೊಡಗಿನ ಪರಿಸರದ ಮೇಲೆ ಅಭಿವೃದ್ಧಿಯ ದೃಷ್ಟಿಯಿಂದ ಮಾರಕ ಯೋಜನೆಗಳನ್ನು ಜಾರಿಗೆ ತರುವುದರಿಂದ ಜಿಲ್ಲೆ ಹವಾಮಾನದಲ್ಲಿ ವೈಪರೀತ್ಯ ಕಂಡುಬರುತ್ತಿದೆ. ದಕ್ಷಿಣ ಭಾರತಕ್ಕೆ ನೀರುಣಿಸೋ ಕಾವೇರಿ ಹುಟ್ಟುವ ಜಿಲ್ಲೆಯಲ್ಲೇ ಬರದ ತಾಂಡವ ಹನಿ ನೀರಿಗೂ ಹಾಹಾಕಾರವನ್ನು ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *