ತಹಶೀಲ್ದಾರ್‌ರನ್ನ ರಕ್ಷಿಸಲು ಹೋಗಿದ್ದ ಚಾಲಕ ಸಾವು

Public TV
2 Min Read

ತೆಲಂಗಾಣ: ಹೈದರಾಬಾದ್‌ನ ಹೈಯತ್ ನಗರದಲ್ಲಿ ಮಹಿಳಾ ತಹಶೀಲ್ದಾರ್‌ಗೆ ಕಚೇರಿಯಲ್ಲಿಯೇ ಬೆಂಕಿಯಿಟ್ಟು ಕೊಂದ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಈ ಸಾವಿನ ನೋವು ಮಾಸುವ ಮುನ್ನವೇ ತಹಶೀಲ್ದಾರ್‌ರನ್ನ ರಕ್ಷಿಸಲು ಹೋಗಿದ್ದ ಚಾಲಕ ಕೂಡ ಸಾವನ್ನಪ್ಪಿದ್ದಾನೆ.

ಸೋಮವಾರ ಬೆಂಕಿಯಲ್ಲಿ ಸುಡುತ್ತಿದ್ದ ತಹಶೀಲ್ದಾರ್ ವಿಜಯರೆಡ್ಡಿ ಅವರನ್ನು ಚಾಲಕ ಗುರುನಾಥಂ ರಕ್ಷಿಸಲು ಹೋಗಿದ್ದರು. ಈ ವೇಳೆ ಅವರಿಗೆ ಬೆಂಕಿ ತಗಲಿದ್ದು, 80% ದೇಹದ ಭಾಗ ಸುಟ್ಟುಹೋಗಿತ್ತು. ತಕ್ಷಣ ಗಾಯಗೊಂಡಿದ್ದ ಗುರುನಾಥಂ ಅವರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು.

ಹೈದರಾಬಾದ್‌ನ ಕಂಚಂಭಾಗ್‌ನಲ್ಲಿರುವ ಅಪೋಲೋ ಡಿಆರ್‌ಡಿಒ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುನಾಥಂ ತೀವ್ರ ಗಾಯಗೊಂಡಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ತಮ್ಮ ಗರ್ಭಿಣಿ ಪತ್ನಿ ಹಾಗೂ 2 ವರ್ಷದ ಮಗನನ್ನು ಅಗಲಿದ್ದಾರೆ.

ಏನಿದು ಪ್ರಕರಣ?
ಸೋಮವಾರ ಮಧ್ಯಾಹ್ನ ಊಟದ ಸಮಯದಲ್ಲಿ ಕಚೇರಿಗೆ ಬಂದ ಗೌರಲ್ಲಿ ಗ್ರಾಮದ ನಿವಾಸಿ ಸುರೇಶ್ ರೆಡ್ಡಿ ಕೆಲ ಕಾಲ ವಿಜಯ ಅವರ ಜೊತೆ ಮಾತನಾಡಿ ನಂತರ ತಕ್ಷಣ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಊಟದ ಸಮಯದಲ್ಲಿ ಯಾರು ಇಲ್ಲದನ್ನು ಗಮನಿಸಿದ ಆತ ಬಂದು ಈ ಕೃತ್ಯವೆಸೆಗಿದ್ದನು. ಕಚೇರಿಯ ಒಳಗೆ ಬೆಂಕಿ ಹಚ್ಚಿದ ಕಾರಣ ನೋವನ್ನು ತಳಲಾರದೆ ತಹಶೀಲ್ದಾರ್ ವಿಜಯ ಕಚೇರಿಯಿಂದ ಕಾಪಾಡಿ ಎಂದು ಹೊರಗೆ ಬಂದು ಬಾಗಿಲ ಬಳಿ ಬಿದ್ದು ನರಳುತ್ತಾ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಸುರೇಶ್ ರೆಡ್ಡಿಗೂ ಗಂಭೀರ ಗಾಯವಾಗಿದ್ದು, ಆತನೇ ಹೋಗಿ ಪೊಲೀಸರಿಗೆ ಶರಣಾಗಿದ್ದನು.

ಘಟನೆ ನಡೆದ ವೇಳೆ ಕಚೇರಿಯಲ್ಲಿದ್ದ ಅಟೆಂಡರ್ ಮತ್ತು ಕಾರು ಚಾಲಕ ಒಳಗೆ ಹೋಗಿ ಅವರನ್ನು ಉಳಿಸಲು ಪ್ರಯತ್ನ ಮಾಡಿದ್ದರು. ಆದರೆ ಬೆಂಕಿ ಜಾಸ್ತಿಯಾದ ಕಾರಣ ಅವರನ್ನು ಉಳಿಸಲು ಆಗಲಿಲ್ಲ. ಈ ವೇಳೆ ಈ ಇಬ್ಬರು ನೌಕರರು ಗಂಭೀರವಾಗಿ ಗಾಯಗೊಂಡು ಅವರನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾಚಕೊಂಡ ನಗರದ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್, ಮಧ್ಯಾಹ್ನ ಸುಮಾರು 1.40ರ ವೇಳೆಗೆ ಸುರೇಶ್ ಕಚೇರಿಯೊಳಗೆ ಬಂದಿದ್ದಾನೆ. ಊಟದ ಸಮಯವಾದ ಕಾರಣ ಜಾಸ್ತಿ ನೌಕರರು ಕಚೇರಿಯಲ್ಲಿ ಇರಲಿಲ್ಲ. ಸ್ವಲ್ಪ ಸಮಯ ವಿಜಯ ರೆಡ್ಡಿ ಜೊತೆ ಮಾತನಾಡಿದ ಸುರೇಶ್ ನಂತರ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಿದ್ದರು.

ಆರೋಪಿ ಸುರೇಶ್ ರೆಡ್ಡಿ ಬಚರಾಮ್ ನಗರದಲ್ಲಿ ಏಳು ಎಕ್ರೆ ಜಮೀನು ತೆಗೆದುಕೊಂಡಿದ್ದು, ಇದು ಪತ್ರದ ವಿಚಾರದಲ್ಲಿ ವಿವಾದವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರವಾಗಿ ಆತ ಕಚೇರಿಗೆ ಬಂದಿದ್ದ ಎಂದು ಹೇಳಲಾಗಿದೆ. ಆದರೆ ಆತ ಏಕೆ ವಿಜಯ ರೆಡ್ಡಿ ಅವರನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಿದ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈಗ ಆರೋಪಿ ನಮ್ಮ ವಶದಲ್ಲಿದ್ದಾನೆ ಮತ್ತು ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಬಳಿಕ ಕಚೇರಿ ಎದುರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *