ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

Public TV
1 Min Read

ಬೆಂಗಳೂರು: ಸಾರಿಗೆ ಇಲಾಖೆಯ ವತಿಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು‌ (KH Muniyappa) ಕೆಎಸ್‍ಆರ್ ಟಿಸಿ (KSRTC) ಮತ್ತು ಬಿಎಂಟಿಸಿ (BMTC) ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ಬಸ್‍ಗಳಿಗೆ ಹಸಿರು ನಿಶಾನೆ ತೋರಿದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Airport) ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದು ಎಲ್ಲಾ ವಿಮಾನ ನಿಲ್ದಾಣಗಳಿಗಿಂತ ವಿಭಿನ್ನವಾಗಿದೆ ಮತ್ತು ಅತಿ ದೊಡ್ದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಂಚಾರ ಮಾಡಲು ಬಿಎಂಟಿಸಿ ಮತ್ತು ವಾಯುವಜ್ರದ ಎಲೆಕ್ಟ್ರಿಕ್ ಬಸ್‍ಗಳ ಸೇವೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಸ್ ಗಳನ್ನು ನೀಡಲು ಸಚಿವರು ಒಪ್ಪಿಗೆಯನ್ನು ನೀಡಿದರು.

ಈಗಾಗಲೇ ಟರ್ಮಿನಲ್ 1 ರಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದು, ಟರ್ಮಿನಲ್ 2 ರಲ್ಲಿ ನಿಲ್ದಾಣ ಇರಲಿಲ್ಲ. ಹೀಗಾಗಿ ಪ್ರಯಾಣಿಕರು ಟರ್ಮಿನಲ್ 2 ರಿಂದ ಟರ್ಮಿನಲ್ 1 ಗೆ ಬೇರೆ ಬಸ್ ಮೂಲಕ ಆಗಮಿಸಿ ನಂತರ ವಾಯುವಜ್ರ ಬಸ್ ಏರಬೇಕಿತ್ತು. ಆದರೆ ಈಗ ಟರ್ಮಿನಲ್ 2 ರಲ್ಲೇ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಅನೂಕೂಲಕರವಾಗಿದೆ. ಇದನ್ನೂ ಓದಿ: ಅಂಬಾರಿ ಆನೆ ‘ಅರ್ಜುನ’ಗೆ ಕಾಟೇರ ಸಿನಿಮಾ ಅರ್ಪಣೆ

ಇದೇ ವೇಳೆ ದೇವನಹಳ್ಳಿ ತಾಲೂಕಿನ ತೂಬಗೆರೆ ಪಂಚಾಯ್ತಿಗೆ ಬಸ್‍ಗಳ ಅನಾನುಕೂಲ ಇರುವುದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸಲು ಸಾರಿಗೆ ಸಚಿವರಿಗೆ ಮನವಿಯನ್ನು ನೀಡಲಾಯಿತು. ದೊಡ್ಡಬಳ್ಳಾಪುರ ತಾಲೂಕಿನ ಎಸ್‍ಎಸ್ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಬರುವುದರಿಂದ ಬಸ್ ವ್ಯವಸ್ಥೆಗಳು ಹಾಗೂ ಅನ್ನ ದಾಸೋಹ ಭವನವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದೂ ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿಯನ್ನು ನೀಡಲಾಯಿತು.

Share This Article