ಉತ್ತರ ಕರ್ನಾಟಕದಲ್ಲಿ ವಿಚಿತ್ರ ಸನ್ನಿವೇಶ – ಒಂದೆಡೆ ಪ್ರವಾಹ, ಮತ್ತೊಂದೆಡೆ ಕುಡಿಯುವ ನೀರು ಸೇಲ್

Public TV
1 Min Read

ಕಲಬುರಗಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಕಲಬುರಗಿಯ ಭೀಮಾನದಿ ತೀರದಲ್ಲಿ ಕುಡಿಯುವ ನೀರನ್ನು ಬಕೆಟ್‍ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿನ ಭೀಕರ ಮಳೆಯಿಂದ ಕೋಯ್ನಾ ಜಲಾಶಯದ ಮೂಲಕ ಕರ್ನಾಟಕಕ್ಕೆ ಅಪಾರ ನೀರು ಬಿಡಲಾಗುತ್ತಿದ್ದು, ಬೆಳಗಾವಿ, ರಾಯಚೂರು ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ನೆರೆಯಿಂದ ಜನ ತತ್ತರಿಸಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಹನಿ ನೀರಿಲ್ಲದ ಅಲ್ಲಿನ ಜನ ಜಾನುವಾರುಗಳು ಪರಾದಾಡುತ್ತಿದ್ದಾರೆ. ಅಲ್ಲದೆ, ಕುಡಿಯುವ ನೀರನ್ನು ಬಕೆಟ್‍ಗಳಲ್ಲಿ ಮಾರಾಟ ಮಾಡಿದ್ದಾರೆ.

ಒಂದು ಬಕೆಟ್‍ ನೀರನ್ನು 5 ರೂಪಾಯಿಯಂತೆ ಕುಡಿಯುವ ನೀರನ್ನು ಮಾರಾಟ ಕಳೆದ ವರ್ಷ ಹಾಗೂ ಈ ವರ್ಷವೂ ಮಾರಾಟ ಮಾಡಿದ್ದಾರೆ. ಹೀಗಾಗಿ ಆಲಮಟ್ಟಿ ಜಲಾಶಯದಿಂದ, ಇಂಡಿ ಶಾಖಾ ಕಾಲುವೆಗೆ ನೀರು ಹರಿಸಿ ಅಲ್ಲಿಂದ ಆ ನೀರನ್ನು ನೇರವಾಗಿ ಭೀಮಾ ನದಿಗೆ ಬಿಟ್ಟರೆ, ರಾಜ್ಯದಲ್ಲಿ ಉಂಟಾಗಿರುವ ನೆರೆ ಕಡಿಮೆಯಾಗಿ ಇತ್ತ ಬರದ ಸಮಸ್ಯೆ ಸಹ ನಿವಾರಣೆಯಾಗುತ್ತದೆ.

ಭೀಮಾ ನದಿಯಲ್ಲಿ 9 ಬ್ರಿಡ್ಜ್ ಕಂ ಬ್ಯಾರೇಜ್‍ಗಳಿದು ಅಲ್ಲಿ ಹಂತ ಹಂತವಾಗಿ 15 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಹಿಂದೆ ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಯಾದರೆ ಆಲಮಟ್ಟಿಯಿಂದ ಇಂಡಿ ಶಾಖಾ ಕಾಲುವೆಗೆ ನೀರು ಹರಿಸಿ, ಅಲ್ಲಿಂದ ಭೀಮಾ ನದಿಗೆ ನೀರು ಹಲವು ಬಾರಿ ಬಿಡಲಾಗಿದೆ.

ಸದ್ಯ ಅಪಾರ ಪ್ರಮಾಣದ ನೀರು ಹರಿದು ಅಲ್ಲಿನ ಜನ ಅಕ್ಷರಶಃ ತತ್ತರಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಬೇಕಾದ ನೀರಾವರಿ ಅಧಿಕಾರಿಗಳು ಮರಳು ಮಾಫಿಯಾಗೆ ಗುರಿಯಾಗಿ ಭೀಮೆಗೆ ನೀರು ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *