ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ ಬಂದ್‍ಗೆ ಕರೆ

Public TV
1 Min Read

ಬೆಂಗಳೂರು: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ 2020ರ ಫೆಬ್ರವರಿ 13ರಂದು ಕರ್ನಾಟಕ ಬಂದ್‍ಗೆ ಕರ್ನಾಟಕ ರಾಜ್ಯ ಕನ್ನಡ ಒಕ್ಕೂಟಗಳು ನಿರ್ಧರಿಸಿವೆ.

ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದು ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡ ಮಾಜಿ ಕೇಂದ್ರ ಸಚಿವೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿ ಕನ್ನಡ ಒಕ್ಕೂಟಗಳು ಬಂದ್‍ಗೆ ನಿರ್ಧರಿಸಿವೆ.

ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ನಗರದ ಮೌರ್ಯ ಸರ್ಕಲ್ ಬಳಿ ವಿವಿಧ ಕನ್ನಡ ಒಕ್ಕೂಟಗಳು ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯು ಫೆಬ್ರವರಿ 13ರಂದು 100 ದಿನಕ್ಕೆ ಕಾಲಿಡಲಿದೆ. ಅಷ್ಟರೊಳಗೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗದಿದ್ದಲ್ಲಿ ಕರ್ನಾಟಕ ಬಂದ್ ಮಾಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಕನ್ನಡ ಒಕ್ಕೂಟಗಳ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.

ಇಗಾಗಲೇ ಈ ಪ್ರತಿಭಟನೆ 47ನೇ ದಿನಕ್ಕೆ ಕಾಲಿಟ್ಟಿದೆ. ಕೆಲ ದಿನಗಳ ಹಿಂದೆ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ್ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಕೊಟ್ಟ ಭರವಸೆ ಆದಷ್ಟು ಬೇಗ ಈಡೇರದಿದ್ದರೆ ಕರ್ನಾಟಕ ಬಂದ್ ಮಾಡಲಾಗುವು ಎಂದು ಕನ್ನಡ ಒಕ್ಕೂಟಗಳು ಎಚ್ಚರಿಸಿವೆ.

Share This Article
Leave a Comment

Leave a Reply

Your email address will not be published. Required fields are marked *