ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

Public TV
2 Min Read

-ಇಡೀ ರಾತ್ರಿ ಮನೆಯಲ್ಲಿ ಕೂಡಿ ಹಾಕಿ ವಿಕೃತಿ

ಬೆಂಗಳೂರು: ವರದಕ್ಷಿಣೆಯ ದಾಹಕ್ಕೆ ಪಾಪಿ ಪತಿಯೊಬ್ಬ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ ಅಮಾನುಷ ಘಟನೆ ತಡವಾಗಿ ಬೆಳಕಿದೆ ಬಂದಿದೆ.

ಮಂಡ್ಯದ ಅರೆಚಾಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪತಿಯ ಕ್ರೌರ್ಯಕ್ಕೆ ನಲುಗಿ ಪತ್ನಿ ಗೀತಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಇದೇ ಫೆ. 21ರಂದು ರಾತ್ರಿ 9 ಗಂಟೆಗೆ ಮಂಡ್ಯದ ಅರೆಚಾಕನಹಳ್ಳಿಯಲ್ಲಿ ವರದಕ್ಷಿಣೆ ವಿಚಾರಕ್ಕೆ ಮನೆಯಲ್ಲಿ ಪತಿ, ಗೀತಾಳೊಂದಿಗೆ ಮಹಾದೇವಸ್ವಾಮಿ ಗಲಾಟೆ ತೆಗೆದಿದ್ದಾನೆ. ಇದ್ದಕ್ಕಿದ್ದಂತೆ ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ.

ಬೆಂಕಿಯ ಕೆನ್ನಾಲಿಗೆ ಬೆಂದು ಗೀತಾ ಕಿರುಚಾಡುವಾಗ ಪಾಪಿ ಪತಿಯೇ ನೀರು ಸುರಿದು ಬೆಂಕಿ ನಂದಿಸಿದ್ದಾನೆ. ನಂತರ ಈ ವಿಷಯ ಬೇರೆಯವರಿಗೆ ತಿಳಿಸಿದರೆ ಸಾಯಿಸಿಬಿಡ್ತಿನಿ. ಬೆಳಗ್ಗೆ ಮೈಗೆ ಬ್ಯಾಂಡೇಜ್ ಹಾಕ್ತೇನೆ ಏನಾಗಲ್ಲ ಎಂದು ಹೆದರಿಸಿ, ಆ ರಾತ್ರಿಯೆಲ್ಲಾ ಮನೆಯಲ್ಲೇ ಕೂಡಿ ಹಾಕಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾಗೆ ಚಿಕಿತ್ಸೆ ನಡೆಯುತ್ತಿದೆ. ಶೇ. 40ಕ್ಕೂ ಹೆಚ್ಚರಷ್ಟು ದೇಹ ಸುಟ್ಟಿದ್ದರಿಂದ ವೈದ್ಯರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ.

ಪತಿ, ಗೀತಾಳಿಗೆ ಬೆಂಕಿ ಹಚ್ಚಿದ ಮರುದಿನ ಬೆಳಗ್ಗೆ ಮನೆಯಿಂದ ವಾಸನೆ ಬರುವುದನ್ನು ಕಂಡು ಪಕ್ಕದ ಮನೆಯವರು ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯ ಗೀತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರು ಕೂಡ ತಮ್ಮ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ. ಗೀತಾ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದ್ದ ಒಬ್ಬ ಮಗಳಿಗೆ ಹೀಗಾಯ್ತಾಲ್ಲ ಎಂದು ಹೆತ್ತ ತಾಯಿ ಕರುಳ ಬಳ್ಳಿಯ ಸಂಕಟಪಡುತ್ತಿದ್ದಾರೆ.

ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಗೀತಾಳ ಆರೋಗ್ಯವನ್ನು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ. ಸಿ.ಎನ್ ಜಯಂತಿ ವಿಚಾರಿಸಿದರು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರುಗಳಾದ ಡಾ. ರಮೇಶ್, ಡಾ. ಸ್ಮಿತಾ ಸೇರಿದಂತೆ ಒಟ್ಟು 12 ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಾ. ಜಯಂತಿ ಶೇ. 45ರಷ್ಟು ದೇಹ ಸುಟ್ಟಿದೆ. ಸದ್ಯ ಗೀತಾ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ. ಇಂದು ಅವರು ಮಾತನಾಡ್ತಿದ್ದಾರೆ. ಸರ್ಕಾರ ಹಾಗೂ ಆಸ್ಪತ್ರೆಯೇ ಈ ಚಿಕಿತ್ಸೆಯ ವೆಚ್ಚವನ್ನ ಭರಿಸಲಿದೆ. ಎಲ್ಲಾ ವೈದ್ಯರು ಕೂಡ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *