ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

Public TV
2 Min Read

ಅಗರ್ತಲಾ: ವರದಕ್ಷಿಣೆ ತಂದಿಲ್ಲವೆಂದು ಪ್ರಿಯಕರ ಹಾಗೂ ಅವನ ತಾಯಿ ಸೇರಿ 17ರ ಬಾಲಕಿಯನ್ನು ಜೀವಂತವಾಗಿ ಸುಡುವ ಮೂಲಕ ವಿಕೃತಿ ಮೆರೆದಿದ್ದಾರೆ.

ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ದೇಹ ಶೇ.90ರಷ್ಟು ಸುಟ್ಟಿದ್ದು, ಶನಿವಾರ ಜಿ.ಪಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಪರೀತ ಗಾಯವಾಗಿದ್ದರಿಂದ ಬದುಕುಳಿಯಲಿಲ್ಲ. ಆರೋಪಿಯನ್ನು ಅಜೋಯ್ ರುದ್ರ ಪಾಲ್(21) ಹಾಗೂ ಅವನ ತಾಯಿ ಮಿನಾತಿ ಎಂದು ಗುರುತಿಸಲಾಗಿದೆ. ಸಂತೀರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಚಂದ್ರ ಸಹಾ ಅವರು ಈ ಕುರಿತು ಮಾಹಿತಿ ನೀಡಿ, ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಕ್ಟೋಬರ್ 28ರಂದು ಪಾಲ್ ಬಾಲಕಿಯೊಂದಿಗೆ ಓಡಿ ಹೋಗಿದ್ದ. ನಂತರ ಡಿಸೆಂಬರ್ 11ರಂದು ಶಾಸ್ತ್ರೋಕ್ತವಾಗಿ ಮದುವೆಯಾಗಬೇಕು ಎಂದು ನಿಶ್ಚಯಿಸಿದ್ದ. ನಂತರ ಆರೋಪಿ ಪಾಲ್ ತಾಯಿ ಡಿಸೆಂಬರ್ 6ರಂದು ಬಾಲಕಿಯ ಪೋಷಕರನ್ನು ಭೇಟಿಯಾಗಿದ್ದಳು. ಆಗ 50 ಸಾವಿರ ರೂ. ವರದಕ್ಷಿಣೆ ಕೊಡುವಂತೆ ಒತ್ತಾಯಿಸಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದ ಹಣವನ್ನು ನೀಡಲು ನಮ್ಮಿಂದ ಸಾದ್ಯವಿಲ್ಲ. 15 ಸಾವಿರ ರೂ.ಗಳನ್ನು ನೀಡಲು ನಾವು ಶಕ್ತರಾಗಿದ್ದೇವೆ ಎಂದು ಪಾಲ್ ಹಾಗೂ ಕುಟುಂಬಕ್ಕೆ ಅಪ್ರಾಪ್ತೆಯ ಪೋಷಕರು ತಿಳಿಸಿದ್ದಾರೆ. ಪೋಷಕರು ಹೇಳಿದ ಕೆಲವೇ ಗಂಟೆಗಳ ನಂತರ ಪ್ರಿಯಕರ ಹಾಗೂ ಆತನ ತಾಯಿ ಬಾಲಕಿಗೆ ಬೆಂಕಿ ಹಚ್ಚಿದ್ದಾರೆ, ಬಾಲಕಿಯ ದೇಹ ಶೇ.90ರಷ್ಟು ಸುಟ್ಟಿತ್ತು, ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವಿವರಿಸಿದ್ದಾರೆ.

ಆದರೆ ಪೊಲೀಸರ ವಿಚಾರಣೆ ವೇಳೆ ಪಾಲ್ ಬೇರೆಯದೇ ಕಥೆ ಹೇಳಿದ್ದು, ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ಪಾಲ್‍ನ ಆರೋಪವನ್ನು ಬಾಲಕಿಯ ಕುಟುಂಬಸ್ಥರು ಒಪ್ಪಿಲ್ಲ.

ಘಟನೆ ಕುರಿತು ಸಂತ್ರಸ್ತೆಯ ತಾಯಿ ಪ್ರತಿಕ್ರಿಯಿಸಿ, ಆರೋಪಿಯ ತಾಯಿಯು 50 ಸಾವಿರ ರೂ. ಕೇಳಿದಳು. ಆದರೆ ನಮ್ಮಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಹೇಳಿದೆವು. ರಾತ್ರಿ ನಾನು ಕರೆ ಮಾಡಿ ನನ್ನ ಮಗಳ ಬಳಿ ಮಾತನಾಡಬೇಕು ಎಂದು ಹೇಳಿದೆ. ಆದರೆ ಆರೋಪಿ ಪಾಲ್ ಅವಳನ್ನು ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *