ದೊರೆಸ್ವಾಮಿ ಪಾಕ್ ಏಜೆಂಟ್, ದೇಶದ್ರೋಹದ ಪೋಸ್ಟ್ ಹಾಕಿದ್ರೆ ಬೀಳುತ್ತೆ ಗುಂಡೇಟು: ಯತ್ನಾಳ್ ವಾರ್ನಿಂಗ್

Public TV
3 Min Read

– ಕಾಂಗ್ರೆಸ್ ಈಗ ಐಸಿಯುನಲ್ಲಿದೆ
– ದೇಶ ವಿರೋಧಿಗಳು ಪಾಕಿಗೆ ಹೋಗಲಿ

ವಿಜಯಪುರ: ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಡಕ್ ವಾರ್ನಿಂಗ್ ನೀಡಿದ್ದಾರೆ. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಡೆದ ಸಂವಿಧಾನ ಉಳಿಸಿ ಜನಾಂದೋಲನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಕ್ತಪಾತ ಕುರಿತು ಹೇಳಿಕೆ ನೀಡಿದ್ದರು. ಸಂವಿಧಾನ ರದ್ದು ಮಾಡಿದರೆ ರಕ್ತಪಾತ ಆಗುತ್ತೆ. ಅದಕ್ಕೆ ಬಿಜೆಪಿ ಅವರು ಸಂವಿಧಾನವನ್ನು ದುರ್ಬಲ ಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಗರಂ ಆಗಿ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಸಿದ್ದರಾಮಯ್ಯ ಅವರು ಯಾಕೋ ಪೂರ್ತಿ ಹಾದಿ ಬಿಡುತ್ತಿದ್ದಾರೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್‍ನಲ್ಲಿ ಪಾಸಾದ ಬಿಲ್ ಅನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಅವರ ಪಕ್ಷದ ಕಪಿಲ್ ಸಿಬಲ್ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ರಕ್ತಪಾತ ಏಕೆ ಮಾತನಾಡುತ್ತಾರೋ ಗೊತ್ತಿಲ್ಲ. ಅವರ ಉದ್ದೇಶ ದೇಶದಲ್ಲಿ ದಂಗೆ ಏಳಿಸುವುದು, ಅಶಾಂತಿ ಮೂಡಿಸುವುದಾಗಿದೆ ಎಂದು ಆರೋಪಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ದೇಶದಲ್ಲಿರುವ ಯಾವುದೇ ಜಾತಿಯವರಿಗೂ ತೊಂದರೆ ಇಲ್ಲ. ಸೋಮವಾರ ಅಮೆರಿಕ ಅಧ್ಯಕ್ಷರು ಬಂದ ವೇಳೆ ದೆಹಲಿಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಏಳಿಸುವುದು, ಭಾರತದ ಹೆಸರು ಕೆಡಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿರೋಧ ಪಕ್ಷಗಳು ಹತಾಶರಾಗಿದ್ದು, ಇನ್ನೆಂದು ಅಧಿಕಾರಕ್ಕೆ ಬರೋದಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸೋಮವಾರ ವಿಜಯಪುರದಲ್ಲಿ ನಡೆಸಿದ ಈ ಕಾರ್ಯಕ್ರಮ ದೇಶವಿರೋಧಿ ಕಾರ್ಯಕ್ರಮ ಆಗಿದೆ. ದೇಶಕ್ಕೆ ಒಳ್ಳೆಯದು ಮಾಡಲು ಆಗಿಲ್ಲ ಎಂದಿದ್ದಾರೆ. ಇಂತಹ ನೂರು ಸಿದ್ದರಾಮಯ್ಯ, ಸಾವಿರ ರಾಹುಲ್ ಗಾಂಧಿ ಬಂದು ಹೋದರೂ ಈ ದೇಶಕ್ಕೆ ಯಾರೂ ಏನೂ ಮಾಡಲಾಗುವುದಿಲ್ಲ. ಕಾಂಗ್ರೆಸ್ಸಿನವರು ಹತಾಶರಾಗಿದ್ದಾರೆ, ಕಾಂಗ್ರೆಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಕಾಂಗ್ರೆಸ್ ಐಸಿಯುನಲ್ಲಿದೆ. ಅದಕ್ಕೆ ಅವರು ಏನಾದರೂ ಮಾಡಬೇಕು ಎಂದು ಪ್ರಧಾನಿ ಹಾಗೂ ಬಿಜೆಪಿ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಯತ್ನಾಳ್ ದೂರಿದರು.

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎನ್ನುತ್ತಾರೆ. ಇವರಿಗೆ ನಾಚಿಕೆ ಆಗಲ್ವಾ? ಯಾರೂ ಭಾರತದ ಧ್ವಜ ಹಿಡಿಯುತ್ತಿರಲಿಲ್ಲ ಅವರು ಈಗ ಹಿಡಿಯುತ್ತಿದ್ದಾರೆ. ಯಾರು ಭಾರತ ಮಾತಾಕಿ ಜೈ ಅನ್ನುತ್ತಿರಲಿಲ್ಲ ಅವರು ಈಗ ಭಾರತ ಮಾತಾಕಿ ಜೈ ಎನ್ನುತ್ತಿದ್ದಾರೆ. ಜನಗಣಮನ ಅನ್ನದವರು ಈಗ ರಾಷ್ಟ್ರಗೀತೆ ಹಾಡುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಚುಮ್ಮಾ(ಕಿಸ್) ಕೊಡುತ್ತಿದ್ದಾರೆ. ಹಮ್ ಚುಮ್ಮೆಂಗೆ, ಹಮ್ ಕಿಸ್ ಕರೇಂಗೆ ಎನ್ನುತ್ತಿದ್ದಾರೆ. ಇಷ್ಟು ದಿನ ತುಕಡೆ ತುಕಡೆ ಅಂತಿದ್ದವರು, ಈಗ ನಾವು ದೇಶ ಬಿಡೋದಿಲ್ಲ ಅಂತಿದ್ದಾರೆ. ಹೀಗೆ ಭಾರತ ಪರಿವರ್ತನೆ ಆಗುತ್ತಿದೆ. ಈ ರೀತಿ ದೇಶ ಬದಲಿಸಿದ ಮೋದಿಗೆ ಹಾಗೂ ಅಮೀತ್ ಶಾಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯತ್ನಾಳ್ ಹೇಳಿದರು.

ಎಲ್ಲಿದ್ದಾನೆ ಅಮೀರ್ ಖಾನ್? ಭಾರತದಲ್ಲಿ ಪರಿಸ್ಥಿತಿ ಕೆಟ್ಟಿದೆ ನಾವು ಹೋಗಬೇಕು ಅಂತಿದ್ದ ಅಮೀರ್ ಖಾನ್ ಈಗ ಹೋಗಲಿ. ಇಮ್ರಾನ್ ಖಾನ ಸ್ವಾಗತ ಮಾಡಿದ್ದಾನೆ, ದೇಶವಿರೋಧಿಗಳೆಲ್ಲ ಹೋಗಲಿ. ಅವನಿಗೇ ತಿನ್ನಲು ಕೂಳಿಲ್ಲ ಇನ್ನು ಇವರಿಗೇನು ಕೊಡ್ತಾನೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಒಂದು ವಾರದಲ್ಲೇ 32 ಬಿಜೆಪಿ ಶಾಸಕರು ರಾಜೀನಾಮೆ ಕೊಡ್ತಾರೆ ಅನ್ನೋ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಕೆಲವೇ ದಿನಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದ ಅರ್ಧಕ್ಕಿಂತ ಹೆಚ್ಚು ಶಾಸಕರು ಬಿಜೆಪಿಗೆ ಬರಲಿದ್ದಾರೆ. ಪಕ್ಷದ ಟಿಕೆಟ್ ಕೊಟ್ಟರೆ ಬಿಜೆಪಿಗೆ ಬರೋದಾಗಿ ಹೇಳಿದ್ದಾರೆ. ಈ ಕುರಿತು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಚಿಂತಿಸಿ ಹೇಳುವುದಾಗಿ ಹೈಕಮಾಂಡ್ ಹೇಳಿದೆ ಎಂದು ತಿರುಗೇಟು ನೀಡಿದರು. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಬಸ್ಸಿನಲ್ಲಿ ಲಾಹೋರ್ ಗೆ ಹೋಗಿ ಬಂದಿದ್ದರು. ಪಾಕಿಸ್ತಾನ ನಮ್ಮ ವೈರಿ ಎಂದು ಭಾರತ ತಿಳಿದುಕೊಂಡಿಲ್ಲ. ಪಾಕಿಸ್ತಾನ ಆ ರೀತಿ ತಿಳಿದುಕೊಂಡಿದೆ. ಪಾಕಿಸ್ತಾನ ನಮ್ಮ ಬಚ್ಚಾ, ನಾವೇ ಅದರ ತಂದೆ, ನಮ್ಮಿಂದ ಹುಟ್ಟಿದ್ದು ಪಾಕಿಸ್ತಾನ. ನಮ್ಮ ಅಕ್ರಮದಿಂದ ಹುಟ್ಟಿದ್ದು ಪಾಕ್, ಅದು ಸಕ್ರಮವಲ್ಲ. ನೆಹರು ಸ್ವಾರ್ಥದಿಂದ ಪಾಕಿಸ್ತಾನ ಹುಟ್ಟಿದೆ ಎಂದು ಹರಿಹಾಯ್ದರು.

ಬಿಜೆಪಿಯವರು ಭಾರತ ಸ್ವಾತಂತ್ರ್ಯಕ್ಕೆ ಹೋರಾಟದಲ್ಲಿ ಇರಲಿಲ್ಲ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದರಾಮಯ್ಯ ಇದ್ರಾ? ಇಲ್ಲಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ರಾ ಎಂದು ವ್ಯಂಗ್ಯವಾಡಿದರು. ಎಲ್ಲರೂ ಹೋರಾಟ ಮಾಡಿದ್ದಾರೆ. ವಾಜಪೇಯಿಯವರು ಮಾಡಿದ್ದಾರೆ ಆದರೆ ಸಿದ್ದಾಂತ ಬೇರೆ ಇದ್ದವು. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್ ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಮಾತಿನ ಚಾಟಿ ಬೀಸಿದರು.

Share This Article
Leave a Comment

Leave a Reply

Your email address will not be published. Required fields are marked *