ಮತ್ತೆ ನಿರೀಕ್ಷೆ ಮೂಡಿಸಿದ ದೂದ್ ಪೇಡಾ ದಿಗಂತ್

Public TV
1 Min Read

ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಟೀಸರ್  (Teaser)ರಿಲೀಸ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಕುತೂಹಲಕಾರಿ ಅಂಶಗಳಿಂದ ಕೂಡಿರುವ ಟೀಸರ್ ನಲ್ಲಿ ಎಡಗೈಯೇ ಬಳಸುವವನ ತೊಂದರೆಗಳನ್ನು ಕಟ್ಟಿಕೊಡಲಾಗಿದೆ. ಟೀಸರ್ ನಲ್ಲಿ ಬರುವ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್ ಅಂಶಗಳು ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಸಿನಿಮಾ ಮಾಡಲಾಗಿದೆ. ದೂದ್ ಪೇಡ ದಿಗಂತ್ (Digant) ನಾಯಕನಾಗಿ ನಟಿಸಿದ್ದು, ಯುವನಟಿ ಧನು ಹರ್ಷ ನಾಯಕಿಯಾಗಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್, ನಿರೂಪ್ ಭಂಡಾರಿ ತಾರಾಬಳಗದಲ್ಲಿದ್ದಾರೆ.

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವನ್ನು ಸಮರ್ಥ್ ಬಿ ಕಡಕೊಳ್ (Samarth B Kadakol) ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಈ ಸಿನಿಮಾದಲ್ಲಿದೆ. ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್ ನಡಿ  ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ.

ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ಬಿಂಬಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಹುಟ್ಟಾಕುವ ಸಾಧ್ಯತೆಯಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಫೆಬ್ರವರಿಗೆ ಸಿನಿಮಾವನ್ನು ರಿಲೀಸ್ ಮಾಡಲು ಸಜ್ಜಾಗಿದೆ.

Share This Article