ಸಿದ್ದಗಂಗಾ ಶ್ರೀ ಆರೋಗ್ಯದ ಬಗ್ಗೆ ಯಾರೂ ಆತಂಕಪಡೋ ಅಗತ್ಯವಿಲ್ಲ: ಬಿಜಿಎಸ್ ವೈದ್ಯರು

Public TV
2 Min Read

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ವಾಮೀಜಿ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿಪಿಯಲ್ಲಿ ಬದಲಾವಣೆಯಾಗಿದೆ ಅಷ್ಟೇ. ಯಾರೂ ಹೆದರಬೇಡಿ. ಶ್ರೀಗಳ ಆರೋಗ್ಯ ಬೇಗ ಸುಧಾರಿಸುತ್ತದೆ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಹೇಳಿದ್ದಾರೆ.

ಶ್ರೀಗಳಿಗೆ ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಜ್ವರ, ಬಿಪಿ, ಕಫ ಕಂಡುಬಂದಿತ್ತು. ಈಗಾಗಲೇ ರಕ್ತ ಪರೀಕ್ಷೆ, ಎಕ್ಸ್ ರೇ ಮಾಡಲಾಗಿದೆ. ಇದರಲ್ಲಿ ನಿಮೋನಿಯಾ ಕಂಡು ಬಂದಿದೆ. ರಕ್ತ ಪರೀಕ್ಷೆಯ ಮಾಡಿದ್ದೇವೆ. ರಿಪೋರ್ಟ್ ನಲ್ಲಿ ಸ್ವಾಮೀಜಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ತುಮಕೂರಿನಿಂದಲೂ ಕೂಡಾ ವೈದ್ಯರ ತಂಡ ಬಂದಿದೆ. ಸ್ಟಂಟ್‍ನ ಪರೀಕ್ಷೆಯ ವರದಿ ಬರಬೇಕಿದೆ ಎಂದು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹೇಳಿದ್ದಾರೆ.

ಶ್ರೀಗಳಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದೆ. ಈಗ ಶ್ರೀಗಳು ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ಫಂಕ್ಷನ್‍ನಲ್ಲಿ ಒಂದಷ್ಟು ವ್ಯತ್ಯಯವಾಗಿದೆ. ಆದ್ದರಿಂದ ಸಿಟಿ ಸ್ಕ್ಯಾನ್ ಮಾಡಬೇಕಿದೆ. ಅದರ ವರದಿ ಬಂದ ನಂತರ ಆರೋಗ್ಯದ ಬಗ್ಗೆ ಮತ್ತಷ್ಟು ವಿಚಾರ ತಿಳಿಯುತ್ತದೆ. ಆದರೂ ಯಾರೂ ಆತಂಕ ಪಡಬೇಕಾಗಿಲ್ಲ. ಅವರಿಗೆ 110 ವರ್ಷ ವಯಸ್ಸಾಗಿದೆ. ಹಾಗಾಗಿ ಈ ಸಮಸ್ಯೆಗಳು ಬರುವುದು ಸಾಮಾನ್ಯ ಎಂದು ಅವರು ತಿಳಿಸಿದರು.

ಶ್ರೀಗಳನ್ನ ವಾರ್ಡ್‍ನಲ್ಲಿರಿಸಲಾಗಿದೆ. ಅವರಿಗೆ ಪೂಜೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗಿದೆ. ಸದ್ಯಕ್ಕೆ ಶ್ರೀಗಳಿಗೆ ಆಹಾರ ನೀಡುತ್ತಿಲ್ಲ. ಬಿಪಿ ಕಡಿಮೆ ಇದೆ. ಅದಕ್ಕಾಗಿ ಡ್ರಿಪ್ಸ್ ಹಾಕಲಾಗಿದೆ. ದ್ರವಾಹಾರಗಳನ್ನು ನೀಡಲಾಗುತ್ತಿದೆ. ಆಸ್ಪತ್ರೆಯ ಒಳಗಡೆ ಶ್ರೀಗಳು ಪೂಜೆ ಕೈಂಕರ್ಯದಲ್ಲಿ ತೊಡಗಿದ್ದು, ಪೂಜೆ ಮುಗಿದ ನಂತರ ಚಿಕಿತ್ಸೆ ಆರಂಭವಾಗುತ್ತದೆ. ಸೊಗಡು ಶಿವಣ್ಣ, ರೇವಣ ಸಿದ್ಧಯ್ಯ, ಕಣ್ಣೂರು ಶ್ರೀಗಳು, ಡಾ. ಪರಮೇಶ್ ಮತ್ತವರ ತಂಡ ಶ್ರೀಗಳೊಂದಿಗೆ ಇದ್ದಾರೆ ಎಂದು ರವೀಂದ್ರ ಅವರು ತಿಳಿಸಿದ್ದಾರೆ.

ಬಿಜಿಎಸ್ ಆಸ್ಪತ್ರೆಗೆ ಕೂಡಲಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿದ್ದು, ಅವರ ಆರ್ಶಿವಾದ ಪಡೆದು ಶ್ರೀಗಳು ಚೆನ್ನಾಗಿ ಮಾತನಾಡುತ್ತಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀಗಳು ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *