ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಸತತವಾಗಿ ದಾಳಿ ನಡೆಸುತ್ತಿದ್ದ ಪಶ್ಚಿಮ ಬಂಗಾಳದ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata BanerJee) ಇಂದು ಮೃದು ಮಾತುಗಳನ್ನಾಡಿದ್ದು, ಅಚ್ಚರಿ ಮೂಡಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ (CBI) ಹಾಗೂ ಇ.ಡಿ ಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸುವ ಕುರಿತಾದ ನಿರ್ಣಯವನ್ನು ಇಂದು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi), ಅರವಿಂದ್ ಕೇಜ್ರಿವಾಲ್ ಮುಂತಾದ ಅನೇಕ ವಿಪಕ್ಷಗಳ ನೇತಾರರು ಪ್ರಧಾನಿಯವರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಬಳಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿಯೇ ಮುಂದಿನ ಕಾಂಗ್ರೆಸ್ ಅಧ್ಯಕ್ಷ – TNCC ಸಭೆ ನಿರ್ಣಯ
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಛೂ ಬಿಡುತ್ತಿರುವ ಹಿಂದೆ, ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲ ಎಂದೆನಿಸುತ್ತದೆ. ಈ ಷಡ್ಯಂತ್ರದ ಹಿಂದೆ, ಬಿಜೆಪಿಯ ಪ್ರತ್ಯೇಕ ತಂಡವೊಂದಿದೆ ಎಂದೆನಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಬಗ್ಗೆ ಮೃದುವಾಗಿಯೇ ಮಾತನಾಡಿದ ಮಮತಾ ಬ್ಯಾನರ್ಜಿ, ಜಾರಿ ನಿರ್ದೇಶನಾಲಯ (ED), ಸಿಬಿಐ (ಕೇಂದ್ರೀಯ ತನಿಖಾ ದಳ) ಹಾಗೂ ಇನ್ನಿತರ ತನಿಖಾ ಸಂಸ್ಥೆಗಳನ್ನು ಪ್ರಧಾನಿ ಮೋದಿಯವರು, ತಮ್ಮ ವಿರೋಧಿಗಳನ್ನು ನಿಯಂತ್ರಣದಲ್ಲಿ ಇಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತಿಲ್ಲ ಎಂದು ಹೇಳಿದರು.
ಇಡಿ, ಸಿಬಿಐ (CBI) ತನಿಖಾ ಸಂಸ್ಥೆಗಳ ದುರುಪಯೋಗದಿಂದ ಅನೇಕ ಉದ್ಯಮಿಗಳು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಆದರೆ ಇದನ್ನು ಮೋದಿ ಮಾಡಿಲ್ಲ ಎಂದು ನಾನು ನಂಬುತ್ತೇನೆ. ಆಗಾಗ್ಗೆ ನಿಜಾಮ್ ಅರಮನೆಗೆ ಹೋಗುವ ಕೆಲವು ಬಿಜೆಪಿ ನಾಯಕರು (BJP Leader) ಹೀಗೆ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಕೇಂದ್ರ ಸಚಿವ ಅಮಿತ್ ಶಾ (Amit Shah) ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.
ಅಂದಹಾಗೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ನಿರ್ಬಂಧಿಸುವ ಕುರಿತಾಗಿ ಮಮತಾ ಬ್ಯಾನರ್ಜಿಯವರ ಸರ್ಕಾರ ಮಂಡಿಸಿದ್ದ ಠರಾವಿಗೆ, ವಿಧಾನಸಭೆಯಲ್ಲಿ ಮತದಾನ ನಡೆಸಲಾಗಿದ್ದು, ಅದರಲ್ಲಿ ಠರಾವು ಪರವಾಗಿ 189 ಮತಗಳು ಹಾಗೂ ವಿರುದ್ಧವಾಗಿ 69 ಮತಗಳು ಬಂದಿವೆ.