ಇನ್ಮುಂದೆ ನನ್ನ ಕಟೌಟ್ ಹಾಕಬೇಡಿ- ಅಭಿಮಾನಿಗಳಲ್ಲಿ ಯಶ್ ಮನವಿ

Public TV
2 Min Read

ರಾಕಿಂಗ್ ಸ್ಟಾರ್ ಯಶ್ (Yash) ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ, ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್‌ಗೆ ಯಶ್ ಮನವಿ ಮಾಡಿದ್ದಾರೆ.

ಗದಗದ ಸೊರಣಗಿ ಗ್ರಾಮದಲ್ಲಿ ಮೃತರಾಗಿರೋ ಮುರಳಿ, ನವೀನ್, ಹನುಮಂತ ಮೂವರ ಕುಟುಂಬಕ್ಕೂ ಯಶ್ ತೆರಳಿ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ ಅವರ ಜೊತೆ ಇರೋದಾಗಿ ಯಶ್ ಭರವಸೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.

ನಿಮ್ಮೊಂದಿಗೆ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದಿದ್ದಾರೆ. ಈ ದುರ್ಘಟನೆ ಆಗಬಾರದಿದ್ದು, ನನಗೂ ತುಂಬಾ ದುಃಖ ಆಗಿದೆ ಎಂದು ಯಶ್ ಹೇಳಿದ್ದಾರೆ. ಇನ್ಮುಂದೆ ನನ್ನ ಬ್ಯಾನರ್ ಕಟ್ಟ ಬೇಡಿ, ಎಲ್ಲಿಯೂ ಕಟೌಟ್‌ಗಳನ್ನು ಹಾಕಬೇಡಿ ಎಂದು ಯಶ್ ಕೋರಿಕೆಯೊಂದನ್ನ ಮುಂದಿಟ್ಟಿದ್ದಾರೆ.

ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಈ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ. ಅಭಿಮಾನಿಗಳ ಅಭಿಮಾನ ಮತ್ತು ನನ್ನ ಕೆಲಸದಿಂದ ಬದುಕು ರೂಪಿಸಿಕೊಂಡಿದ್ದೇನೆ. ಕಲಾವಿದರ ಮೇಲೆ ಅಭಿಮಾನ ಇರಲಿ ಆದರೆ ಈ ರೀತಿಯ ಅಭಿಮಾನ ಬೇಡ ಎಂದು ಯಶ್ ಮಾತನಾಡಿದ್ದಾರೆ.

ಅಭಿಮಾನಿಗಳು ಅಭಿಮಾನದ ಜೊತೆ ಅವರ ಬದುಕು ರೂಪಿಸಿಕೊಂಡರೆ ನನಗೆ ಸಂತೋಷ. ಈ ಘಟನೆಯಿಂದಾಗಿ ನಾನು ಜನ್ಮದಿನ ಅಚರಣೆ ಮಾಡಬಾರದೆಂದು ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಜನ್ಮದಿನವೆಂದರೆ ನನಗೆ ಭಯವಾಗುತ್ತಿದೆ. ಕೋವಿಡ್ ಕಾರಣ ಜನ್ಮದಿನ ಆಚರಣೆಗೆ ಮುಂದಾಗಲಿಲ್ಲ ಯಶ್ ಮಾತನಾಡಿದ್ದರು. ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ಘೋಷನೆ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಸದಾ ಅವರ ಕುಟುಂಬದ ಜೊತೆ ಇದ್ದೇ ಇರುತ್ತೇನೆ ಎಂದು ಯಶ್ ಭರವಸೆ ನೀಡಿದ್ದರು.

ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ದುಬೈನಲ್ಲೂ ‘ಕಾಟೇರ’ಗೆ ಭರ್ಜರಿ ರೆಸ್ಪಾನ್ಸ್

ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Share This Article