ಕೊಡಗಿಗೆ ನೀರಿನ ಬಾಟಲ್, ಔಷಧ ಬೇಡ, ಸಂತ್ರಸ್ತರ ಖಾತೆಗೆ ಹಣ ಹಾಕಿ: ಸಾ.ರಾ. ಮಹೇಶ್

Public TV
2 Min Read

ಮಡಿಕೇರಿ: ಕೊಡಗಿನ ಜನರಿಗೆ ಸದ್ಯಕ್ಕೆ ಕುಡಿಯುವ ನೀರಿನ ಬಾಟಲ್, ಊಟ, ಹೊದಿಕೆ, ಔಷಧ ಯಾವುದರ ಅಗತ್ಯವಿಲ್ಲ. ಅವರಿಗೆ ಬೇಕಾದ ಕುಡಿಯುವ ನೀರು, ಊಟ, ಹೊದಿಕೆ, ಔಷಧ ಎಲ್ಲವನ್ನೂ ಜಿಲ್ಲಾಡಳಿತ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.

ಕೊಡಗಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಭವಿಷ್ಯದಲ್ಲಿ ಮನೆ ಕಟ್ಟಿಕೊಳ್ಳಲು ಹಣದ ಅವಶ್ಯತೆ ಇದೆ. ಹೀಗಾಗಿ ನಿಮ್ಮ ಸಹಾಯ ಹಸ್ತವನ್ನು ಹಣದ ರೂಪದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ಡಿಸಿ ಕಚೇರಿಯಲ್ಲಿ ಯಾರೆಲ್ಲ ಮನೆ ಕಳೆದುಕೊಂಡಿದ್ದಾರೆ ಅವರ ವಿವರ ಸಿಗುತ್ತದೆ. ಆ ವಿವರ ನೋಡಿ ನೀವೇ ಖುದ್ದಾಗಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿ ಕೊಳ್ಳುವುದಕ್ಕೆ ಸಹಾಯ ಮಾಡಿ ಎಂದು ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.

ನಿನ್ನೆಯಿಂದ ಕಾರ್ಯಾಚರಣೆ ಬಿಗಿಯಾಗಿದ್ದು, ಈಗಾಗಲೇ 3,150 ನಿರಾಶ್ರಿತರನ್ನು ಸರ್ಕಾರ ರಕ್ಷಣೆ ಮಾಡಿದೆ. 450 ರಿಂದ 500 ಜನರು ಇನ್ನೂ ಸಂಕಷ್ಟದಲ್ಲಿದ್ದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜೀರೋ ಟ್ರಾಫಿಕ್ ನಲ್ಲಿ ಸೇನಾ ಪಡೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 4 ಸೇನಾ ಪಡೆ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು ಅದರೊಂದಿಗೆ ವಾಯುಪಡೆ, ನೌಕಾಪಡೆ, ಪೊಲೀಸ್ ಇಲಾಖೆ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ. 31 ಆಹಾರ ಕೇಂದ್ರಗಳಿವೆ ಇದರಿಂದಾಗಿ ಸ್ವಲ್ಪ ಮಟ್ಟಿಗೆ ಜನರ ಆತಂಕ ದೂರವಾಗಿದೆ.

ಮುಖ್ಯಮಂತ್ರಿಗಳು ಬೆಳಗ್ಗೆ 6.45 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಡಗಿನ ಪರಿಸ್ಥಿತಿಗಳೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಸಿಎಂ ಇಂದು ಮಧ್ಯಾಹ್ನ ಕೊಡಗಿಗೆ ಭೇಟಿ ನೀಡಿ ಅನಾಹುತ ನಡೆದಂತಹ ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಪರಿಹಾರದ ಕ್ರಮಗಳು ಏನಾಗಬೇಕು ಎಂಬುದರ ಕುರಿತು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ.

ಹೆಲಿಕಾಪ್ಟರ್ ಕಾರ್ಯಾಚರಣೆ ಬಗ್ಗೆ ಕುರಿತು ಮಾತನಾಡಿದ ಸಾ ರಾ ಮಹೇಶ್ ಅವರು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಅವರೊಂದಿಗೆ ಮಾತನಾಡಿ ಅಲ್ಲಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಹವಮಾನ ಬದಲಾವಣೆ ಸರಿಯಾದರೆ ನಿರಾಶ್ರಿತರನ್ನು ಹೆಲಿಕಾಪ್ಟರ್ ಮೂಲಕವೇ ರಕ್ಷಿಸಲು ಪ್ರಯತ್ನಿಸುತ್ತೇವೆ. ಸದ್ಯಕ್ಕೆ ಸೇನಾ ಪಡೆಯಿಂದ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *