ಆರ್‌ಆರ್‌ಟಿಎಸ್ ಯೋಜನೆಗೆ ಅನುದಾನ ಬಿಡುಗಡೆಗೆ ವಿಳಂಬ – ದೆಹಲಿ ಸರ್ಕಾರಕ್ಕೆ ಸುಪ್ರೀಂ ಚಾಟಿ

Public TV
1 Min Read

ನವದೆಹಲಿ: ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್‍ಗೆ (RRTS) ಅನುದಾನ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ದೆಹಲಿ ಸರ್ಕಾರವನ್ನು ಸುಪ್ರೀಂಕೋರ್ಟ್ (Supreme Court) ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಅನುದಾನ ನೀಡದಿದ್ದಲ್ಲಿ ಜಾಹೀರಾತಿಗೆ ಮೀಸಲಿಟ್ಟ ಹಣವನ್ನು ಬಳಸುವ ಆದೇಶವನ್ನು ನ್ಯಾಯಾಲಯ ಪುನರ್ ಉಚ್ಚರಿಸಿದೆ.

ಕ್ಷಿಪ್ರ ರೈಲು ಯೋಜನೆಗೆ ಹಣವನ್ನು ಒದಗಿಸಲು ದೆಹಲಿ (Delhi) ಸರ್ಕಾರ ವಿಫಲವಾದರೆ, ಈ ಮೊತ್ತವನ್ನು ಅರವಿಂದ್ ಕೇಜ್ರಿವಾಲ್ (Arvind Crazywal) ಸರ್ಕಾರದ ಈ ವರ್ಷದ ಜಾಹೀರಾತು ಬಜೆಟ್‍ನಿಂದ ನೀಡುವ ಬಗ್ಗೆ ಕಳೆದ ನವೆಂಬರ್‌ನಲ್ಲಿ ನ್ಯಾಯಾಲಯ ಆದೇಶಿಸಿತ್ತು. ಇಂದಿನ ವಿಚಾರಣೆಯಲ್ಲಿ, ಸರ್ಕಾರ ಬಜೆಟ್ ಹಂಚಿಕೆಗೆ ಅನುಮತಿ ನೀಡಿದೆ ಮತ್ತು ಕೇಂದ್ರದ ಅನುಮೋದನೆಗೆ ಕಾಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. 7 ದಿನಗಳೊಳಗೆ ಕೇಂದ್ರದ ಒಪ್ಪಿಗೆ ಪಡೆಯುವಂತೆ ದೆಹಲಿ ಸರ್ಕಾರಕ್ಕೆ ಈ ವೇಳೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕ

ಹಿಂದಿನ ವಿಚಾರಣೆಯ ವೇಳೆ, ದೆಹಲಿ ಸರ್ಕಾರ ಜಾಹೀರಾತಿಗಾಗಿ 580 ಕೋಟಿ ರೂ. ಬಜೆಟ್ ಮಾಡಬಹುದು ಆದರೆ ಯೋಜನೆಗೆ ಪಾವತಿಸಬೇಕಾದ 400 ಕೋಟಿ ರೂ. ಹಣ ಒದಗಿಸಲು ಸಾಧ್ಯವಿಲ್ಲವೇ? ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತ್ತು. ಅಲ್ಲದೇ ರಾಷ್ಟ್ರೀಯ ಯೋಜನೆಗಳ ಮೇಲೆ ಇದು ಪರಿಣಾಮ ಬೀರಿದರೆ ಜಾಹೀರಾತಿಗಾಗಿ ಮೀಸಲಿಟ್ಟ ಹಣವನ್ನು ಖರ್ಚು ಮಾಡಲು ನಿರ್ದೇಶಿಸುತ್ತೇವೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ ಹೇಳಿತ್ತು.

ಆರ್‌ಆರ್‌ಟಿಎಸ್ ಯೋಜನೆಯು ದೆಹಲಿಯನ್ನು ಉತ್ತರ ಪ್ರದೇಶದ ಮೀರತ್, ರಾಜಸ್ಥಾನದ ಅಲ್ವಾರ್ ಮತ್ತು ಹರಿಯಾಣದ ಪಾಣಿಪತ್‍ಗೆ ಸಂಪರ್ಕಿಸುವ ವೇಗದ ರೈಲು ಕಾರಿಡಾರ್ ಯೋಜನೆಯಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆಗೆ ಇದು ಪರಿಹಾರ ಎಂದು ಕೋರ್ಟ್ ಪರಿಗಣಿಸಿದೆ. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ – ರಾಗಿ ಮುದ್ದೆಗೆ ಸೈನೈಡ್ ಬೆರೆಸಿದ್ದೆ ಎಂದ ಪತಿರಾಯ!

Share This Article