ಮೊದಲು ನಕ್ಸಲನಾಗಿದ್ದೆ ಮತ್ತೆ ನಕ್ಸಲನನ್ನಾಗಿ ಮಾಡಬೇಡಿ – ಅಧಿಕಾರಿಗಳ ವಿರುದ್ಧ ಗಡ್ಕರಿ ಕಿಡಿ

Public TV
2 Min Read

ನವದೆಹಲಿ: ನನ್ನನ್ನು ಮತ್ತೆ ನಕ್ಸಲನನ್ನಾಗಿ ಮಾಡಬೇಡಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ಸರಿಯಾದ ರೀತಿ ಕೆಲಸ ಮಾಡದ ಅಧಿಕಾರಿಗಳನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮಖದಲ್ಲೆ ತರಾಟೆಗೆ ತೆಗೆದುಕೊಂಡಿರುವ ಅವರು ನನ್ನನ್ನು ಮತ್ತೆ ನಕ್ಸಲನನ್ನಾಗಿ ಮಾಡಬೇಡಿ ಎಂದು ಅವಾಜ್ ಹಾಕಿದ್ದಾರೆ.

ನಾನು ಮೊದಲು ನಕ್ಸಲನಾಗಿದ್ದೆ. ನಂತರ ನಾನು ಆರ್‍ಎಸ್‍ಎಸ್ ಸೇರಿಕೊಂಡಿದ್ದು, ನೀವು ಮತ್ತೆ ನನ್ನ ನಕ್ಸಲನನ್ನಾಗಿ ಮಾಡಬೇಡಿ. ಇದೇ ವಿಚಾರಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರು ಐದು ಬಾರಿ ನನ್ನ ಬಳಿ ಬಂದಿದ್ದಾರೆ. ನೀವು ಮಾಡಿದ ಕೆಲಸಕ್ಕೆ ನನಗೆ ನಾಚಿಕೆಯಾಗುತ್ತಿದೆ. ಈ ವಿಚಾರದಲ್ಲಿ ನಿಮಗೆ ತೊಂದರೆ ಕೊಡುವವರು ಯಾರು ಎಂದು ನನಗೆ ಗೊತ್ತಿದೆ. ಈ ಇಲಾಖೆಗೆ ನಾನು ಮುಖ್ಯಸ್ಥ. ಇಂದು ಸಂಜೆಯೊಳಗೆ ಆ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ನಿತಿನ್ ಗಡ್ಕರಿಯವರು ಈ ಸೂಚನೆ ನೀಡಿದ ತಕ್ಷಣ ಕೇರಳದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಸ್ವಾಧೀನಕ್ಕೆ ಇದ್ದ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಹೆದ್ದಾರಿ ಅಭಿವೃದ್ಧಿ ಯೋಚನೆಗೆ ಕೇರಳದ ರಾಜ್ಯ ಸರ್ಕಾರ ಶೇ.25 ರಷ್ಟು ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರಿಂದ ಆರ್ಥಿಕ ಕಡತವನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಜೆ ಬಿಡುಗಡೆ ಮಾಡಿದೆ.

ಈ ಹಿಂದೆ ಕೇರಳದಲ್ಲಿ ಹೆದ್ದಾರಿ ಅಭಿವೃದ್ಧಿ ಮಾಡುವುದಕ್ಕೆ ವಿಳಂಬವಾಗುತ್ತಿದೆ. ಇದಕ್ಕೆ ಸಂಘ ಪರಿಹಾರವೇ ಕಾರಣ ಎಂದು ಪಿಣರಾಯಿ ವಿಜಯನ್ ವಾಗ್ದಾಳಿ ಮಾಡಿದ್ದರು. ಕೇರಳದಲ್ಲಿ ನಮ್ಮ ಪಕ್ಷವನ್ನು ನಾಶ ಮಾಡುವ ನಿಟ್ಟಿನಲ್ಲಿ ಸಂಘ ಪರಿವಾರ ಕೆಲಸ ಮಾಡುತ್ತಿದೆ. ಈ ಕಾರಣದಿಂದ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷರಾದ ಶ್ರೀಧರನ್ ಪಿಳ್ಳೈ ಅವರು ಕೇಂದ್ರ ಹೆದ್ದಾರಿ ಅಭಿವೃದ್ಧಿ ನಿಗಮಕ್ಕೆ ರಹಸ್ಯ ಪತ್ರ ಬರೆದಿದ್ದು, ನಮ್ಮ ರಾಜ್ಯಕ್ಕೆ ಬರುವ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಿಣರಾಯಿ ವಿಜಯನ್ ಆರೋಪ ಮಾಡಿದ್ದರು. ನಮ್ಮ ರಾಜ್ಯದ ಜನರು ಟ್ರಾಫಿಕ್ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳಬೇಕು ಎಂದು ಬಯಸುವವರು ವಿಕೃತ ಮನಸ್ಥಿತಿ ಇರುವವರು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *