ಅಕ್ರಮ ಕೆಲಸಗಳಿಗೆ ಕೈ ಹಾಕ್ಬೇಡಿ, ನಾವು ಅಧಿಕಾರಕ್ಕೆ ಬಂದ್ಮೇಲೆ ತನಿಖೆ ನಡೆಸ್ತೀವಿ: ಸಿದ್ದರಾಮಯ್ಯ ಎಚ್ಚರಿಕೆ

Public TV
3 Min Read

ಬೆಂಗಳೂರು: ಅಕ್ರಮ ಕೆಲಸಗಳಿಗೆ ಕೈ ಹಾಕಬೇಡಿ. ನಾವು ಅಧಿಕಾರಕ್ಕೆ ಬರುತ್ತೇವೆ. ಬಳಿಕ ಎಲ್ಲಾ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿಗೆ (BJP) ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಡಿಕೆ ಶಿವಕುಮಾರ್ (DK Shivakumar) ಹಾಗೂ ರಣದೀಪ್ ಸುರ್ಜೇವಾಲ (Randeep Surjewala) ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಲು ಪ್ರಾರಂಭಿಸಿದೆ. ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವುದು. ಚುನಾವಣೆಗೆ ದುಡ್ಡು ಮಾಡಿಕೊಳ್ಳೋದಕ್ಕೋಸ್ಕರ ಅಸಮಾಧಾನ ಇರುವ ಮಂತ್ರಿಗಳು, ಶಾಸಕರಿಗೆ ದುಡ್ಡು ಮಾಡಿಕೊಡಲು ನೀರಾವರಿ ಇಲಾಖೆಯಲ್ಲಿ ಟೆಂಡರ್ ಕರೆಯುತ್ತಿದ್ದಾರೆ. ಪಾರದರ್ಶಕತೆ ಇಲ್ಲದೆ, ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಕಮಿಷನ್ ಹೊಡೆಯಲು ಹೀಗೆ ಮಾಡುತ್ತಿದ್ದಾರೆ. ಇದು 40% ಕಮಿಷನ್‌ನ ಮುಂದುವರಿದ ಭಾಗ. ಟೆಂಡರ್ ಮೊತ್ತ ಹೆಚ್ಚಳ ಮಾಡುತ್ತಿದ್ದು, ಬೇಕಾದವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೆಂಡಿಂಗ್ ಬಿಲ್ಸ್ 20 ಸಾವಿರ ಕೋಟಿ ರೂ. ಇದೆ. ಮುಖ್ಯಮಂತ್ರಿಗಳ ಕಚೇರಿಯಲ್ಲೇ ಕಮಿಷನ್ ನಡೆಯುತ್ತಿದೆ. ಸೀನಿಯಾರಿಟಿ ಮೇಲೆ ಬಿಲ್ ಪೆಂಡಿಂಗ್ ಕ್ಲಿಯರ್ ಮಾಡುತ್ತಿಲ್ಲ. ಬದಲಿಗೆ ಜಾಸ್ತಿ ಕಮಿಷನ್ ಕೊಟ್ಟವರ ಬಿಲ್ ಮಾತ್ರ ಕ್ಲಿಯರ್ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಾವು ಎಚ್ಚರಿಕೆ ಕೊಡುತ್ತಾ ಇದ್ದೇವೆ, ಹುಷಾರ್. ಅಕ್ರಮ ಕೆಲಸಗಳಿಗೆ ಕೈ ಹಾಕಬೇಡಿ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಂದಮೇಲೆ ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗೂಳಿಹಟ್ಟಿ ಶೇಖರ್ ನೀರಾವರಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರತಿಯೊಂದಕ್ಕೆ ದಾಖಲಾತಿ ಕೊಡಿ ಎನ್ನುತ್ತಾರೆ. ಗೂಳಿಹಟ್ಟಿ ಶೇಖರ್ ಪತ್ರ ದಾಖಲಾತಿ ಅಲ್ಲವಾ? ಮಾನ ಮರ್ಯಾದೆ ಇಲ್ಲದ, ಲಜ್ಜೆಗೆಟ್ಟ ಸರ್ಕಾರ ಇದು. ಮುಖ್ಯಮಂತ್ರಿಗಳ ಕಚೇರಿಯಲ್ಲೇ ಅಕ್ರಮ ನಡೆಯುತ್ತಿದೆ. ನೀರಾವರಿ ನಿಗಮಗಳ ಸಭೆ ಯಾರ ಅಧ್ಯಕ್ಷತೆಯಲ್ಲಿ ನಡೆಯೋದು? ಎಲ್ಲಾ ನೀರಾವರಿ ನಿಗಮಗಳಿಗೆ ಸಿಎಂ ಅಧ್ಯಕ್ಷರು, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಇದು ನಡೆದಿರುವುದು ಎಂದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದು ತಿಂಗಳು ಮಾತ್ರ ಇರುತ್ತದೆ. ಇಡೀ ಸರ್ಕಾರ ತರಾತುರಿಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಟೆಂಡರ್ ಮಾಡಿಸುತ್ತಿದೆ. ಜಲಸಂಪನ್ಮೂಲ, ಪಿಡಬ್ಲ್ಯುಡಿ, ಸಣ್ಣ ನೀರಾವರಿ, ಇಂಧನ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಇಲಾಖೆಗಳ ಟೆಂಡರ್ ತರಾತುರಿ ಮಾಡುತ್ತಿದ್ದಾರೆ. ಟೆಂಡರ್ 500 ಕೋಟಿಯನ್ನು 1,000 ಕೋಟಿ ರೂ.ಗೆ ಹೆಚ್ಚು ಮಾಡುತ್ತಿದ್ದಾರೆ ಎಂದರು.

ಟೆಂಡರ್ ಕೊಡಲು ಶಾಸಕರಿಗೆ ಹಂಚಿದ್ದಾರೆ. ಅವರು ಬೀದಿಯಲ್ಲಿ ನಿಂತು ಕೆಲಸ ಕೊಡುತ್ತೇವೆ ಬನ್ನಿ ಎಂದು ಕರೆಯುತ್ತಿದ್ದಾರೆ. ಕೆಲ ಮಂತ್ರಿಗಳು ಕ್ಯಾಬಿನೆಟ್‌ಗೆ ತಂದು ಪಾಸ್ ಮಾಡಿಕೊಂಡರೆ, ಇನ್ನೂ ಕೆಲವರು ಹಾಗೆಯೇ ಟೆಂಡರ್‌ಗೆ ಮುಂದಾಗಿದ್ದಾರೆ. ಚುನಾವಣೆ ಕೆಲಸಕ್ಕೆ ಹಣ ಕೊಡಿ ಎಂದು ಟೆಂಡರ್ ಒಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಸ್ ಮದುವೆಯಲ್ಲಿ ಪ್ರತ್ಯಕ್ಷ- ಜನರಲ್ಲಿ ಅಚ್ಚರಿ

ಬರೀ ವಸೂಲಿ ಮಾಡಿ ಎಲೆಕ್ಷನ್‌ಗೆ ಹೋಗುತ್ತಾ ಇದ್ದಾರೆ. ಅವರ ಶಾಸಕರೇ ನಮಗೆ ಈ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ. ಕೆಲಸ, ಬಿಲ್ ಕ್ಲಿಯರ್ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಒಬ್ಬರನ್ನು ಕೂರಿಸಿದ್ದಾರೆ. ಅವರಿಗೆ ಕಮಿಷನ್ ಕೊಟ್ಟರೆ ಕ್ಲಿಯರ್ ಆಗುತ್ತದೆ. 7,000 ಕೋಟಿ ರೂ. ಪಾಟ್ ಹೋಲ್ ಮುಚ್ಚಿದ್ದಾರೆ ಎನ್ನುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ತಿಂಗಳಲ್ಲಿ ಎಲ್ಲವನ್ನೂ ರದ್ದು ಮಾಡುತ್ತೇವೆ. ನಾವು ಸುಮ್ಮನೆ ಬಿಡಲ್ಲ. ಎಲ್ಲವನ್ನೂ ತನಿಖೆ ಮಾಡುತ್ತೇವೆ, ಎಲ್ಲರನ್ನೂ ಒಳಗೆ ಹಾಕಿಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ, 40% ಕಮಿಷನ್ ಮುಂದುವರಿದ ಭಾಗ ನಮ್ಮ ಸರ್ಕಾರ ಬಂದ ಮೇಲೆ ವಿಚಾರಣೆ ಮಾಡಿಸುತ್ತೇವೆ. ತನಿಖಾ ಸಂಸ್ಥೆಯನ್ನು ರಚನೆ ಮಾಡಿಸುತ್ತೇವೆ. ಬಸವರಾಜ ಬೊಮ್ಮಾಯಿ ಜೊತೆ ಸಚಿವರು, ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಎಲ್ಲರಿಗೂ ನಾವು ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Shivamogga Airport ನಾಮಕರಣ ವಿವಾದ- ಉದ್ಘಾಟನೆಗೆ ಡೇಟ್ ಫಿಕ್ಸ್ ಆದ್ರೂ ಫೈನಲ್ ಆಗಿಲ್ಲ ಹೆಸರು!

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *