ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

Public TV
1 Min Read

– 500 ರೂ. ಇದೆ ನಾಲ್ಕು ದಿನ ಜೀವನ ನಡೆಸ್ತೇವೆ

ರಾಯಚೂರು: ಮಳೆಯಿಂದ ಹಾನಿಯಾದರೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ, ಇಲ್ಲಿಗೆ ಬಂದು ಏನು ಮಾಡುತ್ತೀರಿ, ಯಡಿಯೂರಪ್ಪನವರೇ ನೀವು ಇಲ್ಲಿಗೆ ಬರಬೇಡಿ ಎಂದು ಸಂತ್ರಸ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದ ಗ್ರಾಮಸ್ಥರು ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ. ನಾವಿನ್ನೂ ಸತ್ತಿಲ್ಲ, ಬದುಕಿದ್ದೇವೆ. ಮನೆಯಲ್ಲಿ ಅಕ್ಕಿ, ಜೋಳ ಇವೆ ಖರ್ಚಿಗೆ 500ರೂ. ಇದೆ. ಇನ್ನೂ ನಾಲ್ಕು ದಿನ ಮಳೆ ಬಂದರೂ ನಮಗೆ ಏನೂ ಆಗುವುದಿಲ್ಲ ತಲೆಕೆಡಿಸಿಕೊಳ್ಳಬೇಡಿ. ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೀರಿ ಅಧಿಕಾರ ನಡೆಸಿ, ಇಲ್ಲಿಗೆ ಬರಲು ಹೋಗಬೇಡಿ, ನಾವು ಹೇಗಾದರೂ ಹಾಳಾಗಿ ಹೋಗಲಿ, ನೀವು ಮಾತ್ರ ಇಲ್ಲಿಗೆ ಬರಬೇಡಿ. ಇನ್ನೂ ನಾಲ್ಕು ದಿನ ಮಳೆ ಬಂದರೂ ಏನೂ ಆಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡಿವೆ. ಯಾಪಲದಿನ್ನಿ ಸೋಲಾರ್ ಪ್ಲಾಂಟ್ ಬಳಿ ರಸ್ತೆ ಬಂದ್ ಆಗಿದೆ. ಜಮೀನಿಗೆ ನೀರು ನುಗ್ಗಿದೆ, ರೈತರು ಸಂಕಷ್ಟದಲ್ಲಿದ್ದಾರೆ ಹೀಗಿದ್ದರೂ ಸಹ ಸರ್ಕಾರದಿಂದ ಒಂದು ರೂಪಾಯಿ ಬಿಡಿಗಾಸೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಇತ್ತ ತಿರುಗಿ ಸಹ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಇಷ್ಟೆಲ್ಲಾ ಹಾನಿಯಾದರೂ ಸಂತ್ರಸ್ತರಿಗೆ ಈವರೆಗೆ ಏನೂ ಕೊಟ್ಟಿಲ್ಲ, ಇನ್ನೂ ನಮಗೇನು ಕೊಡುತ್ತೀರಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ನಿಮ್ಮ ಕೈಯ್ಯಲ್ಲಿ ಆಗಿಲ್ಲ. ಹೀಗಾಗಿ ನಮ್ಮ ಬಳಿಗೂ ಬರಬೇಡಿ, ನಾವು ಹೇಗೋ ಬದುಕುತ್ತೇವೆ ಎಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಗ್ರಾಮಸ್ಥರ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *