ನೆರೆ ಸಂತ್ರಸ್ತರೇನು ಭಿಕ್ಷುಕರಲ್ಲ- ಮತ್ತೆ ಸಿಡಿದೆದ್ದ ಯತ್ನಾಳ್

Public TV
2 Min Read

ಬಾಗಲಕೋಟೆ: ಉತ್ತರ ಕರ್ನಾಟಕದ ನೆರೆ ಪರಿಹಾರ ವಿಳಂಬ ಪ್ರಶ್ನಿಸಿ ಗುಡುಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆಯ ಬನಹಟ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತರೇನು ಭಿಕ್ಷೆ ಬೇಡುತ್ತಿಲ್ಲ. ಸಂತ್ರಸ್ತರು ಎಲ್ಲರೂ ಅನುಕೂಲವಾಗಿದ್ದವರು. ಏನೋ ದುರ್ದೈವದಿಂದ ಇಂತಹ ಕಷ್ಟ ಬಂದಿದೆ. ನಾವು ಸಂತ್ರಸ್ತರನ್ನು ಭಿಕ್ಷುಕರಂತೆ ನೋಡಬಾರದು. ಹಾಗೆ ನೋಡಿದರೆ ಚುನಾವಣೆಯಲ್ಲಿ ನಮಗೂ ಭಿಕ್ಷೆ ಬೇಡೋ ಪರಿಸ್ಥಿತಿ ಬರುತ್ತೆ ಎಂದು ಕೇಂದ್ರದ ನಾಯಕರಿಗೆ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ:ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಿಡಿದ ಯತ್ನಾಳ್

ಎಲ್ಲಿ ಜನ ಕಷ್ಟದಲ್ಲಿದ್ದಾರೋ, ಎಲ್ಲಿ ಪ್ರವಾಹ ಪೀಡಿತರಿದ್ದಾರೋ ಅವರಿಗೆ ಸೂಕ್ತ ಪರಿಹಾರ ಕೊಡಬೇಕು. ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಕೊಡದಿರೋದೇ ಜನರನ್ನು ಸಿಟ್ಟಿಗೇಳಿಸಿದೆ. ನಾಲ್ಕುನೂರು ಕೋಟಿ ರೂಪಾಯಿಯನ್ನು ನಾಲಕ್ಕೇ ದಿನಕ್ಕೆ ಬಿಹಾರಕ್ಕೆ ಕೊಡುತ್ತೀರಿ. ಆದರೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ 65 ದಿನ ಆದರೂ ಪರಿಹಾರ ಕೊಡೋದಿಲ್ಲ. ಪ್ರವಾಹದ ನಿರ್ಲಕ್ಷ್ಯದ ಬಗೆಗಿನ ತಮ್ಮೊಳಗಿನ ಭೇಗುದಿಯನ್ನು ಕೊಲ್ಹಾಪುರ ಸಾಂಗ್ಲಿ ಚುನಾವಣೆಯಲ್ಲಿ ಜನ ಹೊರಹಾಕಿದ್ದಾರೆ. ಆ ಪರಿಸ್ಥಿತಿ ಕರ್ನಾಟಕದಲ್ಲಿ ಮುಂದುವರಿಯಬಾರದು ಅಂದರೆ ರಾಜ್ಯ ಪ್ರವಾಹ ಪರಿಸ್ಥಿತಿ ಉಸ್ತುವಾರಿಗಾಗಿ ಕೇಂದ್ರದ ಒಬ್ಬ ಮಂತ್ರಿಯನ್ನು ನೇಮಿಸಬೇಕು. ಆ ಮೂಲಕ ಪ್ರವಾಹ ಪೀಡಿತರಿಗೆ ಯೋಗ್ಯ ಪರಿಹಾರ, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ

ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರವಾಗಿ ಮಾತನಾಡಿ, ಒಟ್ಟಾರೆ ಜನರ ಭಾವನೆಯೆ ಬೇರೆ ಇದೆ. ಜನ ಏನು ತೀರ್ಪು ಕೊಟ್ಟಿದ್ದಾರೆ ಇದರ ಮೇಲೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಭಾವನೆ ಏನಿದೆ ಎಂದು ತಿಳಿದುಕೊಳ್ಳಬೇಕು. ಯಡಿಯೂರಪ್ಪ ನಾಯಕತ್ವದಿಂದಲೇ ನಾವು 104 ಸ್ಥಾನ ಗೆದ್ದಿದ್ದೇವೆ. ಮಹಾರಾಷ್ಟ್ರದಲ್ಲಿ ನಾವೆಷ್ಟು ಸ್ಥಾನದಲ್ಲಿ ಗೆದ್ದಿದ್ದೇವೆ? ಶಿವಸೇನೆ ಎಷ್ಟು ಗೆದ್ದಿದೆ ಎಂದು ತಿಳಿದುಕೊಳ್ಳಬೇಕು. ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಬೇಕು. ಹೇಗೆ ದೇಶಕ್ಕೆ ಮೋದಿ, ಅಮಿತ್ ಶಾ ಇದ್ದಾರೆಯೋ, ಅದೇ ರೀತಿ ರಾಜ್ಯಕ್ಕೂ, ಜಿಲ್ಲೆಗೂ ಸ್ಥಳೀಯ ನಾಯಕತ್ವ ಬೇಕು. ಅದರ ಮೇಲೆ ನಾವು ಚುನಾವಣೆಗೆ ಹೋಗಬೇಕು ಎಂದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆಯೇ ಹೊರತು ಧಕ್ಕೆ ಆಗಿಲ್ಲ: ಯತ್ನಾಳ್

ಹಾಗೆಯೇ ನಾವು ನಮಗೆ ಬೇಕಾದ ನಿರ್ಣಯ ಕೈಗೊಂಡರೆ ಜನ ಅದನ್ನು ಒಪ್ಪಬೇಕು ಅಂತೇನಿಲ್ಲ. ಎರಡು ರಾಜ್ಯದ ಚುನಾವಣೆ ನೋಡಿಕೊಂಡು ರಾಜ್ಯ ಬಿಜೆಪಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉಪಚುನಾವಣೆಯೊಳಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಬಿಜೆಪಿಯನ್ನು ಎಚ್ಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *