‘ಪವರ್’ಫುಲ್ ವ್ಯಕ್ತಿಗೆ ಒಂದು ಕರೆ – ಡಾನ್ ರವಿ ಪೂಜಾರಿ ಅರೆಸ್ಟ್

Public TV
2 Min Read

ಬೆಂಗಳೂರು: ಅಂಡರ್ ವರ್ಲ್ಡ್ ಡಾನ್ ಕುಳಿತಲ್ಲೇ ಎಲ್ಲರಿಗೂ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದ ಡಾನ್‍ಗೆ ಅದೊಂದು ಕರೆ ಸಂಕಷ್ಟ ತಂದಿತ್ತು, ಅದು ಬೇರೆ ಯಾರಿಗೂ ಅಲ್ಲ, ಆಗಿನ ಪವರ್‌ಫುಲ್ ಮಿನಿಸ್ಟರ್ ಡಿಕೆ ಶಿವಕುಮಾರ್ ಗೆ ಕರೆ ಮಾಡಲು ಪ್ರಯತ್ನಿಸಿ ಈಗ ರವಿ ಪೂಜಾರಿ ಕಂಬಿ ಎಣಿಸುತ್ತಿದ್ದಾನೆ.

ಹೌದು. ಡಿಕೆಶಿ ಅವರ ಮನೆಯ ಮೇಲೆ ಐಟಿ ದಾಳಿ ನಡೆಯುವಾಗ ದೂರದ ದೇಶದಲ್ಲಿ ಕುಳಿತ್ತಿದ್ದ ರವಿ ಪೂಜಾರಿ ಶಿವಕುಮಾರ್ ಅವರಿಗೆ ಫೋನ್ ಮಾಡೋದಕ್ಕೆ ಪ್ರಯತ್ನ ಮಾಡಿದ್ದನು. ಆದರೆ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದ್ದರಿಂದ ಅವರು ಫೋನ್ ಎತ್ತಿರಲಿಲ್ಲ. ಇಷ್ಟಕ್ಕೇ ಸುಮ್ಮನಾಗದ ರವಿಪೂಜಾರಿ ಡಿಕೆಶಿ ಬಿಟ್ಟು ಅವರ ತಮ್ಮ ಡಿ.ಕೆ ಸುರೇಶ್‍ಗೆ ಫೋನ್ ಮಾಡಿ ಹತ್ತು ಕೋಟಿ ಹಣ ಕೊಡಬೇಕು. ಇಲ್ಲ ಅಂದ್ರೆ ಪ್ರಾಣ ಹೋಗುತ್ತೆ ಅಂತ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಪೊಲೀಸರು ಕೂಡ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ರವಿ ಪೂಜಾರಿ ಮೇಲೆ ಡಿಕೆಶಿ ಸೇಡು ತೀರಿಸಿಕೊಳ್ಳುವುದಕ್ಕೆ ಕಾಯುತ್ತಾ ಇರಬೇಕಾದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೊನೆಗೆ ರವಿಪೂಜಾರಿ ಬಂಧನ ಮಾಡ್ಬೇಕು ಅಂತ ವಿಶೇಷ ತಂಡವನ್ನ ಕೂಡ ತಯಾರು ಮಾಡಲಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕರೆಯ ಜಾಡು ಹಿಡಿದು ಮೂಲಕ್ಕೆ ಕೈ ಹಾಕಿ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ಎರಡು ವರ್ಷದ ನಂತರ ಬೆಂಗಳೂರಿಗೆ ಕರೆತಂದಿದ್ದಾರೆ.

ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಸೋಮವಾರ ಬೆಂಗಳೂರಿಗೆ ಕರೆ ತರಲಾಯಿತು. ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿತ್ತು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಕೋರ್ಟ್ ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ರಾತ್ರಿ 12.40ರ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *