ಮೊಪೆಡ್ ಚೇಸ್‍ಗೆ ಯತ್ನಿಸಿ ಡಿಕ್ಕಿ ಹೊಡೆದ ಬೈಕ್- ದಂಪತಿ ಸೇರಿ ನಾಲ್ವರ ಮೇಲೆ ಹರಿದ ಟ್ರಕ್

Public TV
1 Min Read

ಬೆಂಗಳೂರು: ಟ್ರಕ್, ಮೊಪೆಡ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಮೆಣಸಿ ಗ್ರಾಮದ ಬಳಿ ನಡೆದಿದೆ.

ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯ ಶಾಂತಮ್ಮ, ಸತೀಶ್ ದಂಪತಿ ಹಾಗೂ ಅಜ್ಜನಕಟ್ಟೆ ಗ್ರಾಮದ ಮಂಜುನಾಥ್, ನರಸಿಂಹಮೂರ್ತಿ ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್ ಪೇಟೆ ಹಾಗೂ ದೊಡ್ಡಬಳ್ಳಾಪುರ ಬಳಿಯ ಮೆಣಸಿ ಗ್ರಾಮದ ಬಳಿ ದುರಂತ ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರೂ ಮೃತಪಟ್ಟಿದ್ದಾರೆ.

ಶಾಂತಮ್ಮ ಹಾಗೂ ಸತೀಶ್ ದಂಪತಿ ಮೊಪೆಡ್‍ನಲ್ಲಿ ಗೊಲ್ಲಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ವೇಗವಾಗಿ ಬಂದ ಯುವಕರು ಮೊಪೆಡ್ ಹಿಂದಿಕ್ಕಲು ಯತ್ನಿಸಿದ್ದರು. ಆದರೆ ಸವಾರನ ನಿಯಂತ್ರಣ ಸ್ಕೂಟಿ ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದ ಎರಡು ಬೈಕ್‍ಗಳ ಮೇಲೆ ಹರಿದಿದೆ. ಇದರಿಂದಾಗಿ ದಂಪತಿ ಹಾಗೂ ಯುವಕರು ಗಂಭೀರವಾಗಿ ಗಾಯಗೊಂಡು ಪ್ರಾಣಬಿಟ್ಟಿದ್ದಾರೆ.

ಲಾರಿ ಹರಿದ ಪರಿಣಾಮ ಸ್ಕೂಟಿ ಛಿದ್ರ ಛಿದ್ರವಾಗಿದೆ. ಈ ಘಟನೆ ಆಘಾತಕ್ಕೆ ಒಳಗಾದ ಚಾಲಕ ಸ್ಥಳದಲ್ಲೇ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *