ಆಪರೇಷನ್ ಅಂತೇಳಿ ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ತಲೆಯ ಚಿಪ್ಪನ್ನೇ ತೆಗೆದ ವೈದ್ಯ!

Public TV
1 Min Read

ಹಾಸನ: ಖಾಸಗಿ ವೈದ್ಯರ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬರು ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ಹೊಳೆನರಸೀಪುರ ಪಟ್ಟಣದ ರಾಜು ಎಂಬವರಿಗೆ ಬ್ರೈನ್ ಹ್ಯಾಮರೇಜ್ ಕಾರಣ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತಲೆ ಬುರುಡೆ ಸ್ಕ್ಯಾನ್ ಮಾಡಿದ ಆಸ್ಪತ್ರೆಯ ನರರೋಗ ತಜ್ಞ ಹಾಗೂ ಶಸ್ತ್ರಚಿಕಿತ್ಸಕರು ಅವರ ಮೆದುಳಿನಲ್ಲಿ ರಕ್ತ ಸೋರಿಕೆಯಾಗಿದೆ. ಜೀವ ಉಳಿಯಬೇಕಾದ್ರೆ ತಕ್ಷಣ ಆಪರೇಷನ್ ಮಾಡಬೇಕು ಅಂತ ಹೇಳಿದ್ದರು.


ಅದರಂತೆ ತಲೆಯ ಎಡಭಾಗದ ಚಿಪ್ಪು ತೆಗೆದು ಆಪರೇಷನ್ ಮಾಡಿದ ವೈದ್ಯರು, ಮಿದುಳಿನ ರಕ್ತಸ್ರಾವ ತಡೆಗಟ್ಟಿರುವುದಾಗಿ ಹೇಳಿದ್ದಾರೆ. ಮೂರ್ನಾಲ್ಕು ದಿನಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದ ತಲೆಯ ಚಿಪ್ಪು ಅಳವಡಿಸುವುದಾಗಿ ಅವರು ತಿಳಿಸಿದ್ದಾರೆ.

ಆದರೆ 1 ವಾರ ಕಳೆದರೂ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡದ ವೈದ್ಯರು, ಬುರುಡೆಯ ಚಿಪ್ಪಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೇಳಿ ತಲೆಯ ಚಿಪ್ಪನ್ನೇ ಯಾರಿಗೂ ಹೇಳದೆ ಎಸೆದಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಹತ್ತಿರ 3 ಲಕ್ಷ ರೂ. ಖರ್ಚಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಲವಲವಿಕೆಯಿಂದಿದ್ದ ರಾಜು, ಈಗ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಮನೆಯವರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಕೇಳಿದ್ರೆ ಯಾರೂ ಸೂಕ್ತ ಉತ್ತರ ನೀಡುವುದಿಲ್ಲ. ತಪ್ಪು ಮಾಡಿದ ವೈದ್ಯ ಬೆಂಗಳೂರು ಸೇರಿದ್ದಾರೆ. ಚಿಪ್ಪು ಇಲ್ಲದ ಕಾರಣ, ತಲೆಯ ಎಡಭಾಗವನ್ನು ಯಾರೂ ಮುಟ್ಟುವಂತಿಲ್ಲ. ರಾಜು ಅವರಿಗೆ ಹೆಲ್ಮೆಟ್ ಹಾಕಿ ಕೂರಿಸಬೇಕಾಗುತ್ತದೆ. ವೈದ್ಯರ ತಪ್ಪಿನಿಂದ ರಾಜು ಅವರ ಪ್ರಾಣಕ್ಕೆ ಅಪಾಯ ಎದುರಾಗಿದೆ. ಇದಕ್ಕೆ ನ್ಯಾಯ ಕೊಡಿಸಬೇಕು. ಜೊತೆಗೆ ತಪ್ಪು ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *