ಜನರ ದುಡ್ಡು ತಗೊಂಡು ಜನರಿಗೆ ಕೊಡೋಕೆ ನೀವೇ ಆಡಳಿತ ಮಾಡಬೇಕಾ?- ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

Public TV
2 Min Read

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಬೇಕು ಎಂಬ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

ತೈಲ ಬೆಲೆ ಏರಿಕೆ ವಿರುದ್ಧ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡೋದು ಆಮೇಲೆ. ಈಗ ನೀವು ಯಾಕೆ ತರಾತುರಿಯಲ್ಲಿ 3 ರೂ. ಮತ್ತು 3.50 ರೂ. ಬೆಲೆ ಏರಿಕೆ (Price Hike) ಮಾಡಿದ್ರಿ. ಕೇಂದ್ರ ಸರ್ಕಾರ ಬೆಲೆ ಇಳಿಕೆ ಬಗ್ಗೆ ಇಷ್ಟು ದಿನ ಯಾಕೆ ನೀವು ಮಾತಾಡಿಲ್ಲ. ಮೊದಲೇ ಅದನ್ನು ಹೇಳಬೇಕಿತ್ತು ಅಲ್ಲವಾ? ಸರ್ಕಾರದಲ್ಲಿ ಹಣದ ಕೊರತೆಯಿಂದ ಇವತ್ತು ಬೆಲೆ ಏರಿಕೆ ಮಾಡಿ 3 ಸಾವಿರ ಕೋಟಿ ಆದಾಯ ತೆಗೆಯಲು ಹೊರಟಿದ್ದೀರಾ? 3 ಸಾವಿರ ಕೋಟಿ ಜನರ ಜೇಬಿಂದ ಕಿತ್ತುಕೊಳ್ಳೋಕೆ ಹೊರಟಿದ್ದೀರಾ? ಜನರ ದುಡ್ಡು ತೆಗೆದುಕೊಂಡು ನೀವೇನು ಗ್ಯಾರಂಟಿ ಕೊಡೋದು? ಜನರ ದುಡ್ಡು ತಗೊಂಡು ಜನರಿಗೆ ಕೊಡೋಕೆ ನೀವೇ ಬೇಕಾ? ಯಾರು ಬೇಕಾದರೂ ಆಡಳಿತ ನಡೆಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಪೆಟ್ರೋಲ್, ಡಿಸೇಲ್ ಬಳಿಕ ಅದ್ಯಾವುದೋ 25 ಸಾವಿರ ಎಕರೆ ಭೂಮಿ ಮೇಲೆ ಕಣ್ಣು ಹಾಕಿದ್ದಾರೆ ಅಂತೆ. ಅದನ್ನು ಪತ್ರಿಕೆಯಲ್ಲಿ ನೋಡಿದೆ. ಕಾರ್ಯಕ್ರಮಗಳು ಜಾರಿಗೆ ತರುವಾಗ ಅನುಷ್ಠಾನ ತಂದಾಗ ಏನೇನು ಆಗುತ್ತೆ ಅಂತ ಮೊದಲೇ ಯೋಚನೆ ಮಾಡಬೇಕಿತ್ತು ಅಲ್ಲವಾ? ನೀವು ಅರ್ಥಿಕ ಸಚಿವರಾಗಿರುವವರು. 14 ಬಜೆಟ್ ಮಂಡನೆ ಮಾಡಿರೋರು. ಈ ಕಾರ್ಯಕ್ರಮ ಮಾಡಿದರೆ ಏನಾಗುತ್ತೆ ಅಂತ ನಿಮಗೆ ಅನುಭವ ಇರಲಿಲ್ಲವಾ ಎಂದು ಸಿಎಂಗೆ ಪ್ರಶ್ನಿಸಿದರು. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯ್ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

ಇವತ್ತು ಹಲವಾರು ಇಲಾಖೆಗಳಲ್ಲಿ ಹಣ ಸೋರಿಕೆ ಆಗುತ್ತಿದೆ. ಬಿಬಿಎಂಪಿ ಬಗ್ಗೆ ಇವತ್ತು ಒಂದು ಆರ್ಟಿಕಲ್ ಓದಿದೆ. ಬಿಬಿಎಂಪಿಯಲ್ಲಿ ಒಂದು ಕೆಲಸಕ್ಕೆ ಎರಡು ಬಿಲ್ ಮಾಡಿ ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ ಅಂತ ದೊಡ್ಡ ಸುದ್ದಿ ಪತ್ರಿಕೆಯಲ್ಲಿ ಇದೆ. ಬೋರ್ಡ್, ಕಾರ್ಪೋರೇಷನ್‌ಗಳಲ್ಲಿ ಇರೋ ದುಡ್ಡಿಗೆ ಹೇಳೋರು ಕೇಳೋರು ಇಲ್ಲ. ಅದು ಎಲ್ಲಿಗೆ ಹೋಗಿದೆಯೋ ಏನೋ? ಜನರ ಹೆಸರಲ್ಲಿ ಅ ಹಣವನ್ನು ಲೂಟಿ ಮಾಡಿಕೊಂಡು ಕೂತಿದ್ದೀರಾ. ಇದೆಲ್ಲವನ್ನೂ ಬಿಗಿಯಾಗಿ ಆಡಳಿತ ನಡೆಸಿದರೆ ಇವತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡೋ ಅವಶ್ಯಕತೆ ಬರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ ನಷ್ಟ – ಮಹಾರಾಣಿ ವಿವಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

Share This Article