ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

Public TV
1 Min Read

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾದ ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ (Senthil Balaji) ಅವರಿಗೆ ಶೀಘ್ರವೇ ಬೈಪಾಸ್‌ ಸರ್ಜರಿ (Bypass Surgery) ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಇಂದು ಬೆಳಗ್ಗೆ ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೆಂಥಿಲ್‌ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಹೈಡ್ರಾಮವೇ ಸೃಷ್ಟಿಯಾಗಿತ್ತು. ಎದೆಯ ಮೇಲೆ ಕೈಯನ್ನು ಇಟ್ಟು ಸೆಂಥಿಲ್‌ ಬಾಲಾಜಿ ಕಣ್ಣೀರು ಹಾಕಿ ಗೋಳಾಡಿದ್ದರು. ನಂತರ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೆಂಥಿಲ್‌ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್‌ ಬುಲೆಟಿನ್‌ ಪ್ರಕಟಿಸಿದ್ದಾರೆ. ಬೆಳಗ್ಗೆ 10:40ಕ್ಕೆ ಕೊರೊನರಿ ಆಂಜಿಯೋಗ್ರಾಮ್ ನಡೆಯಿತು. ಈ ವೇಳೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬೈಪಾಸ್‌ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿದೆ.

ರಾಜ್ಯ ಸಚಿವ ಶೇಖರ್‌ ಬಾಬು ಪ್ರತಿಕ್ರಿಯಿಸಿ, ಸೆಂಥಿಲ್‌ ಬಾಲಾಜಿ ಈಗ ಐಸಿಯುನಲ್ಲಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರ ಹೆಸರನ್ನು ಕರೆದಾಗ ಅವರು ಪ್ರತಿಕ್ರಿಯಿಸಲಿಲ್ಲ. ಈಗ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ತಿಳಿಸಿದರು.  ಇದನ್ನೂ ಓದಿ: ತಮಿಳುನಾಡು ಅಬಕಾರಿ ಸಚಿವರ ಬಂಧನ; ಇದು BJP ಸೇಡಿನ ರಾಜಕಾರಣ – ಎಂ.ಕೆ ಸ್ಟಾಲಿನ್‌


ಎಐಎಡಿಎಂಕೆ ನಾಯಕರಾಗಿದ್ದ ಸೆಂಥಿಲ್‌ ಬಾಲಾಜಿ ಜಯಲಲಿತಾ ಆಪ್ತರಾಗಿದ್ದರು. ಜಯಲಲಿತಾ ನಿಧನದ ಬಳಿಕ ಪಕ್ಷ ತೊರೆದು ಡಿಎಂಕೆ ಸೇರಿದ್ದರು.

Share This Article