ಕುತೂಹಲ ಮೂಡಿಸಿದ ಜಾರಕಿಹೊಳಿ ಡಿ.ಕೆ ಸುರೇಶ್ ಭೇಟಿ

Public TV
1 Min Read

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಕೆಂಡಕಾರುವ ನೂತನ ಸಚಿವ ರಮೇಶ್ ಜಾರಕಿಹೊಳಿ ಈಗ ಡಿಕೆಶಿ ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್‍ರನ್ನ ಭೇಟಿ ಆಗಿರುವುದು ರಾಜಕೀಯ ಪಾಳಯದಲ್ಲಿ ಕುತೂಹಲ ಹುಟ್ಟಿಸಿದೆ.

ಹೌದು. ಅಣ್ಣನ ಮೇಲೆ ಕೋಪ, ತಮ್ಮನ ಮೇಲೆ ಸಾಫ್ಟ್. ಛಲ ಬಿಡದ ತ್ರಿವಿಕ್ರಮನಂತೆ ಹೇಳಿದ್ದನ್ನ ಮಾಡಿ ಮೀಸೆ ತಿರುವಿದ್ದ ರಮೇಶ್ ಜಾರಕಿಹೊಳಿ ಡಿಕೆಶಿ ನಿರ್ವಹಿಸಿದ್ದ ಖಾತೆಯೇ ಬೇಕು ಅಂತ ಪಟ್ಟುಹಿಡಿದು ಖಾತೆ ಪಡೆದರು. ಇತ್ತ ಸಚಿವರಾದ ನಂತರ ಡಿಕೆಶಿ ಅವರನ್ನ ಮಾತನಾಡಿಸಲಿಲ್ಲ. ಅತ್ತ ವಿಧಾನಸಭೆ ಅಧಿವೇಶನದಲ್ಲಿ ಹೆಚ್.ಕೆ ಪಾಟೀಲ್ ಹತ್ತಿರ ಹೋಗಿ ಕುಳಿತಾಗಲೂ ಅಲ್ಲೇ ಹತ್ತಿರವೇ ಕುಳಿತಿದ್ದ ಡಿಕೆಶಿ ಬಳಿ ರಮೇಶ್ ಜಾರಕಿಹೊಳಿ ಹೋಗಿ ಮಾತನಾಡಿಯೂ ಇರಲಿಲ್ಲ. ಆದರೀಗ ಸಚಿವ ರಮೇಶ್ ಜಾರಕಿಹೊಳಿ, ಸಂಸದ ಡಿ.ಕೆ ಸುರೇಶ್ ಮುಖಾಮುಖಿ ಆಗಿರೋದು ಕುತೂಹಲ ಹುಟ್ಟು ಹಾಕಿದೆ.

ಅಂದಹಾಗೆ ಬೆಂಗಳೂರಿನಲ್ಲಿ ಇವತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯನ್ನ ಸಹೋದರ ಡಿ.ಕೆ ಸುರೇಶ್ ಭೇಟಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕುಣಿಗಲ್ ತಾಲೂಕಿನ ಕುಡಿಯುವ ನೀರಿನ ಯೋಜನೆ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ ರಮೇಶ್ ಜಾರಕಿಹೊಳಿ, ಡಿಕೆ ಸುರೇಶ್ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿಸರು ಎನ್ನಲಾಗಿದೆ.

ಕಾಂಗ್ರೆಸ್ಸಿನ ಘಟಾನುಘಟಿಗೆ ಚಾಲೆಂಜ್ ಹಾಕಿ ಗೆದ್ದ ಸಾಹುಕಾರ ಡಿಕೆಶಿಯನ್ನ ಮಾತನಾಡಿಸದಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಡಿಕೆಶಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದ ರಮೇಶ್ ಜಾರಕಿಹೊಳಿ ಆ ಬಳಿಕ ಮಾತನಾಡಿಲ್ಲ. ಹಾಗಾಗಿ ಇವತ್ತಿನ ಡಿ.ಕೆ ಸುರೇಶ್ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಆಪ್ತರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *