ಡಿಕೆಶಿ ಪಕ್ಷ ನಡೆಸಲಿ, ನಾವು ಅವರೊಂದಿಗೆ ಇರುತ್ತೇವೆ – ಯತೀಂದ್ರ ಸಿದ್ದರಾಮಯ್ಯ

Public TV
1 Min Read

ಮೈಸೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿ. ನಾವು ಅವರ ಜೊತೆಗೆ ಇರುತ್ತೇವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಡಿಕೆಶಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಅವರ ಜೊತೆಗೆ ನಿಲ್ಲಬೇಕು, ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕು. ಈ ನಿಟ್ಟಿನಲ್ಲಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರು ಪ್ರಯತ್ನಿಸಲಿ ಎಂದು ಅಭಿಪ್ರಾಯಪಟ್ಟರು.

ಡಿ.ಕೆ.ಶಿವಕುಮಾರ್ ಹಿಂದೆ ನಾವೆಲ್ಲ ಇದ್ದೇವೆ. ಅವರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗಿದೆ. ಕೆಲ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಇಡಿ, ಸಿಬಿಐಯನ್ನು ಛೂ ಬಿಟ್ಟು ಪಕ್ಷದ ಮುಖಂಡರನ್ನು ಟಾರ್ಗೆಟ್ ಮಾಡಿದೆ. ಶಿವಕುಮಾರ್ ಅವರಿಗೂ ಇದೇ ರೀತಿ ಮಾಡಲಾಯಿತು. ಅವರು ತನಿಖೆಗೆ ಸಹಕರಿಸಿದರೂ ಬಿಡಲಿಲ್ಲ. ಬಿಜೆಪಿಯವರು ಹಬ್ಬ ಮಾಡಲು ಬಿಡದೆ ಅಮಾನವೀಯವಾಗಿ ವರ್ತಿಸಿದರು ಎಂದು ಹರಿಹಾಯ್ದರು.

ಸಿದ್ದರಾಮಯ್ಯ ತವರಲ್ಲಿ ಡಿಕೆಶಿ ಪವರ್ ತೋರಿಸಿದ್ದು, ಮೈಸೂರಿನಲ್ಲಿ ಡಿಕೆಶಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಮೆರವಣಿಗೆಯಲ್ಲಿ ಡಿಕೆಶಿ ಕರೆತಂದ ಕೈ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಇದೇ ವೇಳೆ ಹಾರದಿಂದ ಸೇಬು ಕಿತ್ತುಕೊಂಡು ಡಿ.ಕೆ.ಶಿವಕುಮಾರ್ ತಿಂದರು.

Share This Article
Leave a Comment

Leave a Reply

Your email address will not be published. Required fields are marked *