ರವೆ ಇಡ್ಲಿ ತಿಂದು ಬಾಂಬ್‌ ಇಟ್ಟ ಬಾಂಬರ್‌ – ಡಿಕೆಶಿ

Public TV
2 Min Read

– ಬಾಂಬ್‌ ಸ್ಫೋಟ ಸ್ಥಳಕ್ಕೆ ಡಿಕೆಶಿ, ಪರಮೇಶ್ವರ್‌ ಭೇಟಿ

ಬೆಂಗಳೂರು: ವೈಟ್ ಫೀಲ್ಡ್ ಬಳಿ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, (Rameshwaram Cafe Blast) ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar), ಗೃಹಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಸಿಸಿಬಿ ಪೊಲೀಸರು (CCB Police) ಬಾಂಬ್ ಇಟ್ಟ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕೋದಕ್ಕೆ ಶುರು ಮಾಡಿದ್ದಾರೆ. ಆರೋಪಿ ಯಾರು ಏನು ಎಂಬುದು ಬಹುತೇಕ ಗೊತ್ತಾಗಿದೆ. ಆರೋಪಿ ಬಸ್‌ನಲ್ಲಿ ಬಂದು, ಹೋಟೆಲ್‌ನಲ್ಲಿ ರವೆ ಇಡ್ಲಿ ತಿಂದು ಆಮೇಲೆ ಬಾಂಬ್ ಇಟ್ಟು ಹೋಗಿದ್ದಾನೆ. ಬರುವಾಗ ಮಾಸ್ಕ್‌ ಧರಿಸಿ ಬಂದಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೇ ಆರೋಪಿಗೆ ಸುಮಾರು 35 ವರ್ಷ ವಯಸ್ಸಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಬಾಂಬ್ ಬ್ಲಾಸ್ಟ್ ಟೈಮಿಂಗ್
11:35 – ಹೋಟೆಲ್‌ಗೆ ಬಾಂಬರ್‌ ಆಗಮನ
11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್‌ ಖರೀದಿ
11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ ವ್ಯಕ್ತಿ
11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
12:55 – ಬಾಂಬ್‌ ಸ್ಫೋಟ

ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟು ಹೋದ 1 ಗಂಟೆ ಬಳಿಕ ಬಾಂಬ್ ಬ್ಲಾಸ್ಟ್ ಆಗಿದೆ. ಘಟನಾ ಸ್ಥಳದಲ್ಲಿ ಟೈಮರ್ ಸಹ ಪತ್ತೆಯಾಗಿದೆ. ವ್ಯಕ್ತಿಯ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಸಿಕ್ಕಿಬಿಳುತ್ತಾನೆ ಎಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಸಮಗ್ರ ತನಿಖೆ ನಡೆಸಲು 8 ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್‌ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ಶೀಘ್ರದಲ್ಲೇ ಪೊಲೀಸರು ಆರೋಪಿಗೆ ಹೆಡೆಮುರಿ ಕಟ್ಟುತ್ತಾರೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಡೋಣ… ಕೊಡೋಣ.. ಎಂದು ವ್ಯಂಗ್ಯವಾಡಿದ್ದಾರೆ. ಅವರು ರಾಜಕಾರಣ ಮಾಡಲಿ ನಾವು ಜನರ ಸೇವೆ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: Exclusive: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ – ಎದೆ ಝಲ್ ಎನಿಸುವಂತಿದೆ ಸಿಸಿಟಿವಿ ದೃಶ್ಯಗಳು

Share This Article