ದೇವೇಗೌಡರು ಕಷ್ಟಪಟ್ಟು ಪಕ್ಷ ಕಟ್ಟಿದ್ರು, ಈಗ ಇಂತಹ ಸ್ಥಿತಿ ಬಂತಲ್ಲ: ಡಿ.ಕೆ ಶಿವಕುಮಾರ್ ವ್ಯಂಗ್ಯ

Public TV
1 Min Read

ರಾಮನಗರ: ಜೆಡಿಎಸ್ (JDS) ಈಗ ಎಲ್ಲಿದೆ? ಕುಮಾರಸ್ವಾಮಿಯವರು (H.D Kumaraswamy) ಜೆಡಿಎಸ್ ಪರವಾಗಿ ಮಾತನಾಡುತ್ತಿದ್ದಾರಾ? ಈಗ ಅವರು ಬಿಜೆಪಿ (BJP) ಪರವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯ ವಕ್ತಾರನಂತೆ ಮಾತನಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಮ್ಮನ್ನು ನೂರು ಮಾತು ಬೈಯಲಿ, ಏನೂ ಬೇಕಾದರೂ ಹೇಳಲಿ. ನಮಗೆ ಬೇಸರವಿಲ್ಲ. ಜೆಡಿಎಸ್ ಬಲಪಡಿಸಿ ಎಂದು ಎಂದಾದರೂ ಹೆಚ್‍ಡಿಕೆ ಹೇಳಿದ್ದಾರಾ? ಬಿಜೆಪಿ ಬಲಪಡಿಸಿ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಬಿಜೆಪಿ ಪರ ಮಾತನಾಡಲು ನೇಮಿಸಲಾಗಿದೆ. ಈ ಮೂಲಕ ತೆನೆ ಹೊತ್ತ ಮಹಿಳೆಯನ್ನು ಮುದುರಿ ಹಾಕಿ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಭೇಟಿ ವೇಳೆ ಟಿಕೆಟ್ ವಿಚಾರ ಚರ್ಚಿಸಿಯೇ ಇಲ್ಲ.. ಮೋದಿ ಮತ್ತೆ ಪ್ರಧಾನಿ ಆಗ್ಬೇಕು, ಅದಕ್ಕಾಗಿ ಬದ್ಧ: ಸೋಮಣ್ಣ

ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಎನ್‍ಡಿಎಗೆ ಬೆಂಬಲ ನೀಡಿದ್ದೇವೆ ಎಂಬ ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ, ದೇವೇಗೌಡರು ಹಿಂದೆ ಏನು ಹೇಳಿದ್ರು? ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಅವರು ಹೇಳಿದ್ದನ್ನು ನೀವೇ ಮಾಧ್ಯಮಗಳಲ್ಲಿ ತೋರಿಸಿದ್ದೀರಿ. ಈಗ ಅವರ ಜೊತೆಯಲ್ಲೇ ದೋಸ್ತಿ ಮಾಡ್ತಿದ್ದಾರೆ. ದೊಡ್ಡಗೌಡರು ಕಷ್ಟಪಟ್ಟು ಪಕ್ಷ ಉಳಿಸಿಕೊಂಡಿದ್ದರು. ಈಗ ಆ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬಂತಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಬರಲಿ – ಸಿಎಂ ಸೂಚನೆ

Share This Article