ಕನಕಪುರ ಬಂಡೆ ಸಿಡಿಗುಂಡು- ‘ಬಂಡೆ’ ಕೆತ್ತಿದ್ರೆ ಆಕೃತಿ, ಪೂಜೆ ಮಾಡಿದ್ರೆ ಸಂಸ್ಕೃತಿ

Public TV
2 Min Read

-ಡಿ.ಕೆ.ಸುರೇಶ್ ನನ್ನ ಮಗ
-ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ
-ಜೈಲಿನಲ್ಲಿ ಪ್ರತಿಯೊಂದು ಆ್ಯಕ್ಟ್ ಗಳನ್ನು ಓದಿದ್ದೇನೆ

ಬೆಂಗಳೂರು: ವಿಮಾನ ನಿಲ್ದಾಣದಿಂದ ನೇರವಾಗಿ ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಡಿಕೆಶಿವಕುಮಾರ್ ಇಡಿ ತಮ್ಮೊಂದಿಗೆ ನಡೆದುಕೊಂಡ ಬಗೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ವಿಚಾರಣೆಗೆ ಕರೆದ ಇಡಿ ಅಧಿಕಾರಿಗಳು ಬಂಧಿಸಿದರು. ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಬಳಿಕ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ದೇಗುಲವಾಗಿರುವ ಕೆಪಿಸಿಸಿ ಕಚೇರಿಗೆ ಬಂದಿದ್ದೇನೆ. ನಾನು ಒಬ್ಬ ಪ್ರಜಾಪ್ರತಿನಿಧಿಯಾಗಿ ಕಾನೂನು ಗೌರವಿಸುತ್ತೇನೆ. ನನ್ನ ಪತ್ನಿ, ಪುತ್ರಿ ಮತ್ತು ತಮ್ಮನ ಅಫಡವಿಟ್ ಈಗಾಗಲೇ ಸಲ್ಲಿಸಿದ್ದೇನೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಲೆಕ್ಷನ್ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ದಾಖಲೆಗಳೊಂದಿಗೆ ಬರುತ್ತೇನೆ. ಹುಟ್ಟುತ್ತಾ ಕೃಷಿಕ, ಬೆಳೆಯುತ್ತಾ ಉದ್ಯಮಿಯಾದೆ. ನನ್ನ ಪ್ಯಾಶನ್ ಶಿಕ್ಷಣದಲ್ಲಿತ್ತು, ಹಾಗೆಯೇ ರಾಜಕಾರಣಿಯಾದೆ. ಹಾಗಾಗಿ ಎಲ್ಲ ವ್ಯವಹಾರಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ದೋಖಾ ಮಾಡಿಲ್ಲ.

ನನ್ನ ಪಕ್ಷ ಮತ್ತು ನಾಯಕರು ನೀಡಿದ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ತಾಳ್ಮೆಯಿಂದ ನನ್ನ ಹೋರಾಟ ಮುಂದುವರಿಸುತ್ತೇನೆ. ಬಹುತೇಕ ನಾಯಕರು ನನ್ನನ್ನು ಭೇಟಿಯಾಗಲು ಬಂದರೂ ಸಾಧ್ಯವಾಗಲಿಲ್ಲ.

ನೂರಾರು ಜನ ಕಾರ್ಯಕರ್ತರು ದೆಹಲಿಗೆ ಬಂದಿದ್ದರು. ತಮ್ಮ ಡಿ.ಕೆ.ಸುರೇಶ್ ಸಹ ಕೋರ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಯಾರನ್ನು ಭೇಟಿಯಾಗಲಿಲ್ಲ. ಅವರೇ ಟ್ರೈನ್ ಹಿಡಿದುಕೊಂಡು ದೆಹಲಿಗೆ ಬಂದರು. ದೆಹಲಿಯಲ್ಲಿ ಅವರನ್ನ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.

ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟ್ ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ತಾಯಿಗೆ ಮಗ ಬೇನಾಮಿ ಹೇಗೆ ಆಗುತ್ತಾನೆ. ನಾನು ನನ್ನ ತಾಯಿಗೆ ಸಹಾಯ ಮಾಡೋದು ತಪ್ಪಾ? ನನ್ನ ಮೇಲೆ ನಡೆದ ಈ ಪ್ರಯೋಗ ಮುಂದೆ ಎಲ್ಲರ ಮೇಲೆ ಆಗುತ್ತಾ ನೋಡೋಣ. ನಾನು ಏನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಳ್ಳುತ್ತೇನೆ. ನಾನು ಯಾಕೆ ಈ ಶಿಕ್ಷೆಗೆ ಗುರಿಯಾದೆ ಎಂಬುದರ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರು.

ನಾನು ಏನಾದ್ರೂ ತಪ್ಪು ಮಾಡಿದ್ರೆ, ವ್ಯವಹಾರದಲ್ಲಿ ಮೋಸ ಮಾಡಿದ್ರೆ ಶಿಕ್ಷೆ ನೀಡಲಿ. ಅಧಿಕಾರಿಗಳು ಕೆಲವರು ಒಳ್ಳೆಯವರಿದ್ದಾರೆ. ಕೆಲವರು ವಿಧಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ನನ್ನ ಮಗಳ ಆಸ್ತಿ ಬಗ್ಗೆ ಬಿಜೆಪಿ ಗೆಳೆಯರು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ನನ್ನ ಮಕ್ಕಳು ಶಾಲೆಗೆ ಹೋದಾಗ ನಿಮ್ಮ ತಂದೆ ಜೈಲಿಗೆ ಹೋಗಿದ್ದಾರೆ ಎಂದರೆ ಮಕ್ಕಳು ಏನು ಉತ್ತರ ಕೊಡುತ್ತಾರೆ ಎಂದು ಯೋಚನೆ ಮಾಡಿದ್ರೆ ಮನಸ್ಸಿಗೆ ನೋವು ಆಗುತ್ತದೆ. 86 ವರ್ಷದ ನನ್ನ ತಾಯಿ ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕೆಂದು ಹೇಳುತ್ತಾರೆ. ಇದನ್ನು ನೀವೇ ಯೋಚನೆ ಮಾಡಿ ಎಂದರು.

ನನ್ನನ್ನು ಬರಮಾಡಿಕೊಳ್ಳಲು ಅಪಾರ ಬೆಂಬಲಿಗರು ಬಂದಿದ್ದರಿಂದ ಹಲವರಿಗೆ ತೊಂದರೆಯಾಗಿದೆ. ನನ್ನ ಬಂಧನವಾದಾಗ ಪ್ರತಿಭಟನೆ ನಡೆಸಿದ್ದರಿಂದ ಹಲವರಿಗೆ ಕಷ್ಟವಾಗಿದೆ. ಹೀಗಾಗಿ ಕಾರ್ಯಕರ್ತರು ಮತ್ತು ಪಕ್ಷದ ಪರವಾಗಿ ಕ್ಷಮೆ ಕೇಳುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *