ಡಿಕೆಶಿಗೆ ಗುಲಾಂ ನಬಿ ಆಜಾದ್ ಕೊಟ್ಟಿದ್ದು ಸಿಹಿ ಸುದ್ದಿಯೋ? ಕಹಿ ಸುದ್ದಿಯೋ?

Public TV
1 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್ ಈಗ ಕ್ಯಾಪ್ಟನ್ ಇಲ್ಲದ ಟೀಂನಂತಾಗಿದೆ. ಎಲೆಕ್ಷನ್ ಸೋಲಿನಿಂದಾಗಿ ವಿಪಕ್ಷ-ಸಿಎಲ್‍ಪಿ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಎರಡು ತಿಂಗಳು ಕಳೆದಿವೆ. ಆದರೆ ರಾಜೀನಾಮೆಯನ್ನೂ ಅಂಗೀಕರಿಸಿಯೂ ಇಲ್ಲ, ಮತ್ತೊಬ್ಬರನ್ನು ನೇಮಕ ಮಾಡಿಯೂ ಇಲ್ಲ. ನೇಮಕದ ವಿಚಾರದ ಬಗ್ಗೆ ಸಾಕಷ್ಟು ಸರ್ಕಸ್ ನಡೆದಿದ್ದರೂ ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬರಲಾಗಿಲ್ಲ. ಈ ನಡುವೆ ಇಂದು ಎಐಸಿಸಿ ನಾಯಕ ಗುಲಾಂ ನಬಿ ಆಜಾದ್ ಡಿಕೆಶಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿಕೆ ಶಿವಕುಮಾರ್ ಮನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಭೇಟಿ ನೀಡಿದರು. ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದ ಗುಲಾಂ ನಬಿ ಆಜಾದ್ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ರು. ಆಜಾದ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಕ್ಕೆ ಸಾಕಷ್ಟು ರೆಕ್ಕೆಪುಕ್ಕಗಳು ಬಂದಿವೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಗುಲಾಂ ನಬಿ ಅಜಾದ್ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಡಿಕೆಶಿಗೆ ಯಾವುದೇ ಸ್ಪಷ್ಟತೆ ನೀಡಲಿಲ್ಲ ಎನ್ನಲಾಗಿದೆ.

ಡಿಕೆಶಿ ಜತೆ ಮಾತನಾಡುವ ವೇಳೆ ಮಾರ್ಚ್ 5ರೊಳಗೆ ಕೆಪಿಸಿಸಿಗೆ ಹೊಸ ಅಧ್ಯಕ್ಷರ ಘೋಷಣೆ ಸಾಧ್ಯತೆ ಇದೆ ಎಂದು ಗುಲಾಂ ನಬಿ ಆಜಾದ್ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುವಂತೆ ಹೇಳಿದ ಆಜಾದ್, ಕೆಪಿಸಿಸಿ ಅಧ್ಯಕ್ಷ ಹುದ್ದೆ ಡಿಕೆಶಿಗೆ ಸಿಗುತ್ತಾ ಇಲ್ಲವಾ ಎಂಬುದರ ಬಗ್ಗೆ ಸ್ಪಷ್ಟತೆ ಕೊಡಲಿಲ್ಲವಂತೆ. ಆಜಾದ್ ಮಾತಿನಿಂದ ವಿಚಲಿತರಾಗಿರುವ ಡಿ.ಕೆ. ಶಿವಕುಮಾರ್ ಕೆಪಿಸಿಸಿಗೆ ನೂತನ ಸಾರಥಿ ಯಾರು ಎಂಬುದರ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದಾರೆ ಅನ್ನೋದು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಸದ್ದು ಮಾಡ್ತಿದೆ.

Share This Article
Leave a Comment

Leave a Reply

Your email address will not be published. Required fields are marked *