ತಡರಾತ್ರಿ ಡಿಕೆಶಿಯಿಂದ ವಿನಯ್ ಗುರೂಜಿ ಭೇಟಿ

Public TV
1 Min Read

– ಇಂದು ಬೆಳಗ್ಗೆ ಅಜ್ಜಯ್ಯನ ಭೇಟಿ

ಬೆಂಗಳೂರು: ಗುರುವಾರ ತಡರಾತ್ರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಂಕಷ್ಟದಿಂದ ಪಾರು ಮಾಡುವಂತೆ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಸಂಕಷ್ಟ ತೋಡಿಕೊಂಡಿದ್ದಾರೆ.

ಡಿಕೆಶಿ ಖಾಸಗಿ ಹೋಟೆಲಿನಿಂದ ನೇರವಾಗಿ ಉತ್ತರ ಹಳ್ಳಿಗೆ ಹೋಗಿ ದೇವ ಮಾನವ ವಿನಯ್ ಗುರೂಜಿಯನ್ನು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಡಿ.ಕೆ ಶಿವಕುಮಾರ್ ಕುಟುಂಬ ವಿನಯ್ ಗುರೂಜಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪತಿಯ ಸಂಕಷ್ಟ ಕಂಡು ವಿನಯ್ ಗುರೂಜಿ ಮುಂದೆ ಡಿಕೆಶಿ ಪತ್ನಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಗುರೂಜಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ನವೆಂಬರ್‌ವರೆಗೆ ಇಂತಹ ಅಗ್ನಿ ಪರಿಕ್ಷೆ ಎದುರಾಗುತ್ತಲೇ ಇರುತ್ತದೆ. ನವೆಂಬರ್‌ವರೆಗೆ ನಿಮ್ಮ ಟೈಂ ಸರಿ ಇಲ್ಲ. ನವೆಂಬರ್ ನಂತರ ನಿಮ್ಮ ಎಲ್ಲಾ ಸಂಕಷ್ಟಗಳು ಹಂತ ಹಂತವಾಗಿ ದೂರ ಆಗಲಿದೆ. ಯಾವುದೇ ರಾಜಕೀಯವಾದ ಮಾತುಗಳನ್ನಾಡದೇ ಮೌನವಾಗಿರುವುದು ಒಳಿತು ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ ನಂತರ ದತ್ತಾತ್ರೆಯನ ಸನ್ನಿಧಿಯಲ್ಲಿ ಸಂಕಷ್ಟ ಹರ ಸಂಕಲ್ಪ ಪೂಜೆ ಮಾಡಿ ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಬಳಿ ಕೇಳಿಕೊಂಡಿದ್ದಾರೆ. ಇಂದು ಬೆಳಗ್ಗೆ ಕೂಡ ಡಿ.ಕೆ ಶಿವಕುಮಾರ್ ಸಂಕಷ್ಟದಿಂದ ಪಾರು ಮಾಡುವಂತೆ ತಮ್ಮ ನಂಬಿಕೆಯ ದೈವ ಮಾನವ ನೊಣವಿನಕೆರೆ ಅಜ್ಜಯ್ಯನನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಭಕ್ತರೊಬ್ಬರ ಮನೆಯಲ್ಲಿ ಅಜ್ಜಯ್ಯ ತಂಗಿದ್ದರು. ಮಾಹಿತಿ ತಿಳಿದು ಆ ಭಕ್ತರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ. ಜೊತೆಗೆ ಅಜ್ಜಯ್ಯನ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಅಮವಾಸ್ಯೆ ಪೂಜೆ ಮಾಡಿಸಿದ್ದಾರೆ.

ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶಿಸಿದೆ. ಇದರಿಂದ ಡಿಕೆಶಿ ಫುಲ್ ಟೆನ್ಶನ್ ಆಗಿದ್ದು, ತಡರಾತ್ರಿ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಕೆಶಿ ಆಪ್ತರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ ಯಾವೊಬ್ಬ ಕಾಂಗ್ರೆಸ್ ನಾಯಕರು ಭೇಟಿ ಮಾಡಿಲ್ಲ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *