ಪ್ರತಿಯೊಂದು ಬೂತ್‍ನಲ್ಲಿ ಬಿಜೆಪಿಗೆ ಹೆಚ್ಚು ಮತ ಕೊಡಿಸಬೇಕು : ಡಿಕೆಶಿ ಎಡವಟ್ಟು

Public TV
1 Min Read

ತುಮಕೂರು: ವಿರೋಧಿಗಳ ಮೇಲೆ ಮುಗಿಬೀಳುವ ಧಾವಂತದಲ್ಲಿ ದೋಸ್ತಿಯ ಅಗ್ರ ನಾಯಕರು ಇವತ್ತು ನಾಲಿಗೆ ಜಾರಿಸಿಕೊಂಡ ಪ್ರಸಂಗಗಳು ನಡೆದಿವೆ. ತುಮಕೂರಿನ ಕುಣಿಗಲ್‍ನಲ್ಲಿ ಸಹೋದರ ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಓಟ್ ಕೇಳುವಾಗ ಡಿಕೆಶಿ ಅವರು ಕಾಂಗ್ರೆಸ್, ಜೆಡಿಎಸ್‍ಗಿಂತ ಬಿಜೆಪಿಗೆ ಹೆಚ್ಚು ಮತ ಕೊಡಿಸಬೇಕು ಎಂದು ಹೇಳಿದರು.

ಕುಣಿಗಲ್‍ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬಿಜೆಪಿ ಹೇಳಿದ ಉತ್ತಮ ದಿನಗಳು ಇನ್ನು ಬಂದಿಲ್ಲ. ಬಡವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ನುಡಿದಂತೆ ನಡೆಯಲು ಆಗದ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಬಂದು ಮತ ಕೇಳುವ ಅರ್ಹತೆ ಇಲ್ಲ ಎಂದರು.

ಸರ್ಕಾರದ ವತಿಯಿಂದ ಹಣವನ್ನು ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇವೆ. ಕ್ಷೇತ್ರದ ಎಲ್ಲಾ ಕ್ಷೇತ್ರಗಳಿಗೂ ಕೂಡ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಇದು ರಾಷ್ಟ್ರದಲ್ಲಿ ಒಂದು ದಾಖಲೆ ಆಗಿದೆ. ಅದ್ದರಿಂದ ಪ್ರತಿಯೊಂದು ಬೂತ್‍ನಲ್ಲಿ ಕೂಡ, ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತ ಬಂದಿದೆ ಎಂದು ನೋಡಿ. ಅದಕ್ಕಿಂತ ಹೆಚ್ಚು ಬಿಜೆಪಿಗೆ ವೋಟ್ ಕೊಡಿಸಬೇಕು ಎಂದರು. ಮೈತ್ರಿ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವ ಧಾವಂತದಲ್ಲಿ ಬಿಜೆಪಿಗೆ ವೋಟ್ ಕೊಡಿಸಬೇಕೆಂದು ಡಿಕೆಶಿ ಹೇಳಿದರು. ಈ ವೇಳೆ ಸಭೆಯಲ್ಲಿ ಇದ್ದ ಕಾರ್ಯಕರ್ತರು ಡಿಕೆಶಿ ಅವರ ಮಾತಿಗೆ ಕ್ಷಣ ಕಾಲ ಕಾರ್ಯಕರ್ತರು ವಿಚಲಿತರಾದರು.

ಇದಕ್ಕೂ ಮುನ್ನ ಪ್ರಚಾರ ನಡೆಸಿ ಮಾತನಾಡಿ ಡಿಕೆ ಸುರೇಶ್ ಅವರು, ಬಿಜೆಪಿ ಕಾರ್ಯಕರ್ತರು ನನಗೆ ಬೆಂಬಲ ನೀಡುತ್ತಿದ್ದು, ಅಶ್ವಥ್‍ನಾರಾಯಣ್ ಅವರ ಪರ ಪ್ರಚಾರ ನಡೆಸುತ್ತಿರುವ ಮುಖಂಡರು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ ಇದಕ್ಕಿಂತ ನನಗೆ ಏನು ಬೇಕು ಎಂದು ಹೇಳಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *