ನಾಳೆಯೂ ಬೆಂಗಳೂರಿಗೆ ಬರಲ್ಲ ಡಿಕೆಶಿ

Public TV
1 Min Read

ನವದೆಹಲಿ: ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬುಧವಾರ ರಾತ್ರಿ ಸುಮಾರು 9.15ಕ್ಕೆ ತಿಹಾರ್ ಜೈಲಿನಿಂದ ಹೊರ ಬಂದ ಡಿ.ಕೆ.ಶಿವಕುಮಾರ್, ತಮ್ಮನ್ನು ಬೆಂಬಲಿಸಿದ ಎಲ್ಲ ಕಾರ್ಯಕರ್ತರು, ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದರು. ತದನಂತರ ನೇರವಾಗಿ ಶಿವಾಲಯ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಸಂಜೆ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಬೆಂಗಳೂರಿನತ್ತ ಪಯಣ ಬೆಳೆಸಲಿದ್ದಾರೆ ಎಂದು ಹೇಳಲಾಗಿತ್ತು. ಶುಕ್ರವಾರ ಡಿಕೆ ಶಿವಕುಮಾರ್ ಕುಲದೇವತೆ ಕಬ್ಬಾಳಮ್ಮ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದವು. ಆದರೆ ಕಾರಣಾಂತರಗಳಿಂದ ಡಿಕೆ ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ.

ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎಐಸಿಸಿ ಕಚೇರಿಗೂ ಭೇಟಿ ಕೊಟ್ಟ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆಗೂ ಮಾತುಕತೆ ನಡೆಸಿದರು.

ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನನ್ನ ಬಂಧನದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ನನ್ನ ಬಂಧನ ಕಂಡು ಕೆಲವರು ಖುಷಿ ಪಟ್ಟಿದ್ದಾರೆ. ಯಾರು ಯಾರಿಗೆ ಎಷ್ಟೆಷ್ಟು ಆಫರ್ ಮಾಡಿದ್ದಾರೆ ಅಂತ ನನಗೆ ಗೊತ್ತು. ನನ್ನ ಪರವಾಗಿ ಹೋರಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇವತ್ತು ದೆಹಲಿಯ ಡಿಕೆ ಸುರೇಶ್ ನಿವಾಸಕ್ಕೆ ನೂರಾರು ಅಭಿಮಾನಿಗಳು ಆಗಮಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ, ಮಾಜಿ ಮೇಯರ್‍ಗಳಾದ ಪದ್ಮಾವತಿ, ಸಂಪತ್‍ಕುಮಾರ್, ಎಲ್ ಹನುಮಂತಯ್ಯ ಸೇರಿ ಹಲವು ಮುಖಂಡರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಮಧ್ಯೆ ಇಡಿ ಸಮನ್ಸ್ ರದ್ದು ಕೋರಿ ಡಿಕೆಶಿ ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಲಾಯ್ತು.

Share This Article
Leave a Comment

Leave a Reply

Your email address will not be published. Required fields are marked *