ಹೇಳಿಕೆಗಳಿಗೆ ಬ್ರೇಕ್‌ ಬೀಳದಿದ್ರೆ ಸರ್ಕಾರದಿಂದ ಹೊರಗಿರುತ್ತೇನೆ: ಎಂಬಿಪಿ ವಿರುದ್ಧ ಡಿಕೆಶಿ ಕೆಂಡಾಮಂಡಲ

Public TV
1 Min Read

ಬೆಂಗಳೂರು: ಸಚಿವ ಎಂಬಿ ಪಾಟೀಲ್‌ (MB Patil) ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಕೆಂಡಾಮಂಡಲವಾಗಿದ್ದು ಈಗ ಹೈಕಮಾಂಡ್‌ ನಾಯಕರಿಗೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯ (Siddaramaiah) ಪೂರ್ಣಾವಧಿ ಸಿಎಂ ಎಂದು ಹೇಳಿಕೆ ನೀಡಿದ್ದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಈ ರೀತಿ ಹೇಳಿಕೆ ನೀಡಿದರೆ ನಾನು ಸರ್ಕಾರದಿಂದ ಹೊರಗಿರುತ್ತೇನೆ ಎಂದು ನೇರವಾಗಿಯೇ ಹೈಕಮಾಂಡ್‌ ನಾಯಕರಿಗೆ ಡಿಕೆಶಿ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಸುಮಲತಾ ಅನೈತಿಕ ಬೆಂಬಲದಿಂದ ಮೆಲುಕೋಟೆಯಲ್ಲಿ ಬಿಜೆಪಿಗೆ ಕಡಿಮೆ ಮತ: ಪರಾಜಿತ ಅಭ್ಯರ್ಥಿ ಇಂದ್ರೇಶ್ ಆಕ್ರೋಶ

 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌, ಕರ್ನಾಟಕ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲಾ ಅವರಿಗೆ ಕರೆ ಮಾಡಿದ ಡಿಕೆಶಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಹೇಳಲು ಎಂಬಿ ಪಾಟೀಲ್‌ ಯಾರು? ಅವರು ಹೈಕಮಾಂಡ್‌ ನಾಯಕರೇ? ಅವರು ಕಾಂಗ್ರೆಸ್‌ ಅಧ್ಯಕ್ಷರೇ? ಯಾವ ಆಧಾರದ ಮೇಲೆ ಎಂ.ಬಿ.ಪಾಟೀಲ್ ಮಾತನಾಡಿದ್ದಾರೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಈಗಲೇ ಈ ರೀತಿ ಶುರುವಾದರೆ ಮುಂದೆ ಮುಂದೆ ಕಷ್ಟವಾಗಲಿದೆ. ಸಚಿವಾಗಿರುವ ಎಂಬಿ ಪಾಟೀಲ್‌ ಈ ರೀತಿಯಾಗಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ಸಿದ್ದು ಪೂರ್ಣಾವಧಿ ಸಿಎಂ’ – ಕಾಂಗ್ರೆಸ್ ಒಳಗೆ ಬೆಂಕಿ ಹಚ್ಚಿದ ಎಂಬಿಪಿ

 

ನನ್ನ ನಿಲುವು ಸ್ಪಷ್ಟವಾಗಿದೆ. ಕೊಟ್ಟ ಮಾತು ಉಳಿಸಿಕೊಂಡು ಸರ್ಕಾರದ ಭರವಸೆ ಈಡೇರಿಸುವುದು ನನ್ನ ಮೊದಲ ಆದ್ಯತೆ. ಈ ರೀತಿಯ ಮಾತುಗಳು ಮತ್ತಷ್ಟು ಬಂದರೆ ನಾನು ಸರ್ಕಾರದಿಂದ ಹೊರಗಿರಲು ಸಿದ್ದ. ಬಹಿರಂಗ ಹೇಳಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕುವುದಾದರೆ ಹಾಕಿಸಿ. ಈ ರೀತಿಯ ಹೇಳಿಕೆಗಳಿಗೆ ಕಡಿವಾಣ ಬೀಳದೇ ಇದ್ದರೆ ನಾನು ಸರ್ಕಾರದ ಭಾಗವಾಗಿರಲ್ಲ ಎಂದು ಡಿಕೆಶಿ ಹೈಕಮಾಂಡ್‌ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Share This Article