ಡಿಕೆಶಿ, ಶ್ರೀರಾಮುಲು ಮುಖಾಮುಖಿ – ಎದುರಾಗುತ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ನಾಯಕರು

Public TV
2 Min Read

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮುಳುಗಿರುವ ಕಾಂಗ್ರೆಸ್, ಬಿಜೆಪಿ ನಾಯಕರು ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಇಂದು ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋರಾಟ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದಂತೆ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ಅವರೊಂದಿಗೆ ಮಾತಕತೆ ನಡೆಸಿದ್ದು, ಸುಮಾರು 30 ನಿಮಿಷ ಕಾಲ ಇಬ್ಬರು ಮಾತನಾಡಿದ್ದಾರೆ. ಇದೇ ವೇಳೆ ಶ್ರೀರಾಮುಲು ಅಣ್ಣ ಎಂದು ಕರೆಯುವ ಮೂಲಕ ಡಿಕೆ ಶಿವಕುಮಾರ್ ಅವರು ಕೈಮುಗಿದು ಮಾತನಾಡಿದರು. ಡಿಕೆ ಶಿವಕುಮಾರ್ ಅವರ ಈ ಮಾತಿಗೆ ಕ್ಷಣ ಕಾಲ ಕಕ್ಕಾಬಿಕ್ಕಿಯಾದ ಶ್ರೀರಾಮುಲು ಅವರು, ಟ್ರಬಲ್ ಶೂಟರ್ ಎಂದು ಕರೆದು ಮುಗಳ್ನಕ್ಕರು. ಆ ಮೂಲಕ ಇಬ್ಬರು ಮಾತಿನಲ್ಲೇ ಕಾಲೆಳೆದುಕೊಂಡರು.

ಅಪರೇಷನ್ ಕಮಲ: ಇದಕ್ಕೂ ಮುನ್ನ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎರಡು ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಆ ಬಳಿಕ ದೇಶದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಕರ್ನಾಟಕದಲ್ಲೂ ನಮ್ಮದೇ ಸರ್ಕಾರ ರಚನೆ ಆಗಲಿದೆ. ಈಗಾಗಲೇ 104 ಸ್ಥಾನಗಳಲ್ಲಿ ಗೆದ್ದಿದ್ದು, ಉಪಚುನಾವಣೆ ಬಳಿಕ 106 ಆಗುತ್ತೆ. ಇದರ ಬೆನ್ನಲ್ಲೇ ಇಬ್ಬರು ಪಕ್ಷೇತರರು ಬೆಂಬಲ ಸಿಗುತ್ತೆ. ಇನ್ನು ಹೆಚ್ಚಿನ ಶಾಸಕನ್ನು ಸೆಳೆಯಲು ನಮ್ಮ ರಾಜ್ಯಾಧ್ಯಕ್ಷರು ಪ್ರಯತ್ನ ನಡೆಸಿದ್ದಾರೆ. ಸರ್ಕಾರ ರಚನೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಆಪರೇಷ್‍ನ್ ಕಮಲ ಸುಳಿವು ನೀಡಿದರು.

ಕುಮಾರಸ್ವಾಮಿ ರೆಸಾರ್ಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ವಿಶ್ರಾಂತಿ ಪಡೆಯುವುದಕ್ಕೆ ನನ್ನ ವಿರೋಧ ಇಲ್ಲಾ. ಆದರೆ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಅವರ ಆಡಳಿತ ಸೀಮಿತವಾಗಬಾರದು. ನಾವೇನೂ ತಪ್ಪು ಮಾಡಿಲ್ಲ, ಉಳಿದ ಜಿಲ್ಲೆಗಳ ಕಡೆ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಅವರು ಅಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರ ಮಾತಿನಲ್ಲೇ ಒಂದು ಅರ್ಥ ಇರುತ್ತೆ, ಮನಸ್ಸಿನಲ್ಲಿ ಮತ್ತೊಂದು ಅರ್ಥ ಇರುತ್ತೆ. ಈ ವಿಚಾರ ಎಲ್ಲರಿಗೂ ತಿಳಿದಿದ್ದು. ನಮ್ಮನ್ನು ಅಣ್ಣ ಎಂದು ಕರೆದರೆ ಏನು ಆಗುವುದಿಲ್ಲ. ಅವರ ಮಾತಿನ ಒಳಾರ್ಥ ಎಲ್ಲರಿಗೂ ತಿಳಿದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *